
ಲಂಡನ್: ಇಲ್ಲಿನ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಭಾರತ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್’ನಲ್ಲಿ ಭಾರತ 191 ರನ್ನಿಗೆ ಕುಸಿದ ನಂತರ ಎರಡನೆಯ ಇನ್ನಿಂಗ್ಸ್’ನಲ್ಲಿ ಅದ್ಭುತ ಕಮ್-ಬ್ಯಾಕ್ ಮಾಡಿದೆ. ರೋಹಿತ್ ಶರ್ಮ ಅಮೋಘ ಶತಕ ಹಾಗು ಚೇತೇಶ್ವರ್ ಪೂಜಾರ ಮತ್ತು ಕೆ.ಎಲ್ ರಾಹುಲ್ ಅವರ ಉಪಯುಕ್ತ ಆಟದ ನೆರವಿನಿಂದ 3ನೇ ದಿನದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 270 ರನ್ ಗಳಿಸಿದೆ.
ಎರಡನೆಯ ಇನ್ನಿಂಗ್ಸ್’ನಲ್ಲಿ ನಿನ್ನೆಯ ಅಜೇಯ 43ರನ್ನಿನಿಂದ ಇಂದು ಆತ ಮುಂದುವರೆಸಿದ ಭಾರತ 83 ರನ್ ಆಗುವಷ್ಟರಲ್ಲಿ ಉತ್ತಮವಾಗಿ ಆಡುತ್ತಿದ್ದ ಕೆ.ಎಲ್ ರಾಹುಲ್ ಅಂಪೈರ್ ಅವರ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ರಾಹುಲ್ ಸ್ಕೊರ್ 46 ರನ್. ಎರಡನೆಯ ವಿಕೆಟಿಗೆ ರೋಹಿತ್ ಶರ್ಮ ಜತೆಯಾದ ಚೇತೇಶ್ವರ ಪೂಜಾರ ಜೋಡಿ 153 ರನ್ನುಗಳ ಜತೆಯಾಟ ನಡೆಸಿತು. ರೋಹಿತ್ ಶರ್ಮ ಅಮೋಘ ಶತಕ ದಾಖಲಿಸಿದರೆ , ಪೂಜಾರ ಅರ್ಧ ಶತಕ ಬಾರಿಸಿದರು. ರೋಹಿತ್ ಶರ್ಮ ಗಳಿಕೆ 256 ಎಸೆತಗಳಲ್ಲಿ 127 ರನ್, ಪೂಜಾರ ಸ್ಕೊರ್ 127 ಎಸೆತಗಳಲ್ಲಿ 61 ರನ್. ಉತ್ತಮವಾಗಿ ಆಡುತ್ತಿದ್ದ ಜೋಡಿ ಹೊಸ ಬಾಲ್ ಬದಲಾಯಿಸಿದ ಬೆನ್ನಿಗೆ ವಿಕೆಟ್ ಒಪ್ಪಿಸಿತು. ಕೇವಲ 1 ರನ್ನಿನ ಅಂತರದಲ್ಲಿ ಎರಡೂ ವಿಕೆಟ್ ಕಳೆದುಕೊಂಡ ಭಾರತ ಆಘಾತ ಅನುಭವಿಸಿತು.
ಮಂದ ಬೆಳಕಿನ ಕಾರಣ 14 ಓವರ್ ಬಾಕಿ ಇರುವಂತೆಯೇ 3ನೇ ದಿನದ ಆಟವನ್ನು ನಿಲ್ಲಿಸಲಾಯಿತು. ವಿರಾಟ್ ಕೊಹ್ಲಿ 22 ರನ್ ಹಾಗು ಬಡ್ತಿ ಪಡೆದು ಬಂದ ರವೀಂದ್ರ ಜಡೇಜಾ 9 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. 171 ರನ್ನುಗಳ ಮುನ್ನಡೆ ಸಾಧಿಸಿದ್ದು ಇನ್ನು ಎರಡು ದಿನದ ಆಟ ಬಾಕಿಯಿದೆ.
ಮೇಲ್ನೋಟಕ್ಕೆ ನಾಲ್ಕನೇ ಟೆಸ್ಟ್ ಪಂದ್ಯ ಭಾರತದ ಹಿಡಿತದಲ್ಲಿದ್ದಂತೆ ಕಂಡು ಬರುತ್ತಿದ್ದು ನಾಲ್ಕನೇ ದಿನವಾದ ನಾಳೆ ಒಳ್ಳೆಯ ಮೊತ್ತ ಪೇರಿಸಿ ಎದುರಾಳಿ ಇಂಗ್ಲೆಂಡಿಗೆ ಕಠಿಣ ಗುರಿ ನೀಡಿದರೆ ಪಂದ್ಯ ಗೆದ್ದು ಬೀಗಬಹುದು. ಆದರೆ ಈ ಸರಣಿಯಲ್ಲಿ ಉತ್ತಮವಾಗಿ ಆಡಿ ನಂತರ ಒಮ್ಮೆಲೇ ನಾಟಕೀಯ ಕುಸಿತ ಕಾಣುವ ನಿದರ್ಶನಗಳು ನಡೆದಿರುವುದರಿಂದ ನಾಲ್ಕನೇ ದಿನದಾಟ ಫಲಿತಾಂಶದ ದೃಷ್ಟಿಯಿಂದ ಅತ್ಯಂತ ಮಹತ್ವ ಪಡೆದಿದೆ.












































