
ಚಂಡೀಗಡ್: ಅಚ್ಚರಿಯ ಬೆಳವಣಿಗೆಯಲ್ಲಿ ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿದ್ದು ರಾಜೀನಾಮೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಬೆನ್ನ ಹಿಂದೆ ಸರಣಿ ಸಭೆ ನಡೆಸಿ ಅವರು ರಾಜೀನಾಮೆ ನೀಡುವಂತೆ ಮಾಡಿ ಸಫಲರಾದ ಬಳಿಕ ಸಿದ್ದು ಈ ನಡೆ ಅಚ್ಚರಿಗೆ ಕಾರಣವಾಗಿದೆ.
ಕಾಂಗ್ರೆಸ್ ಪರಮೋಚ್ಚ ನಾಯಕಿ, ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ತಾನು ಪಕ್ಷದ ಸೇವೆಯನ್ನು ಮುಂದುವರೆಸುವುದಾಗಿ ಹೇಳಿಕೊಂಡಿದ್ದಾರೆ. ರಾಜಿ ಮಾಡಿಕೊಳ್ಳುವುದರಿಂದ ಮನುಷ್ಯನ ಘನತೆ ಕುಸಿಯುತ್ತದೆ. ಪಂಜಾಬ್ ನ ಭವಿಷ್ಯದ ದೃಷಿಯಿಂದ ತಾನು ರಾಜಿ ಮಾಡಿಕೊಂಡು ಹೋಗಲು ಸಿದ್ಧನಿಲ್ಲ. ಹಾಗಾಗಿ ತನ್ನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡುತ್ತೇನೆ ಎಂದು ಸಿದ್ದು ರಾಜೀನಾಮೆ ಪತ್ರದಲ್ಲಿ ಹೇಳಿಕೊಂಡಿದ್ದಾರೆ.
ಸಿದ್ದು ರಾಜೀನಾಮೆ ಕುರಿತು ಟ್ವಿಟ್ಟರ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ [ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ನಾನು ಮೊದಲೇ ಹೇಳಿದ್ದೆ ಆ ಮನುಷ್ಯ ಸ್ಥಿರನಲ್ಲ. ಆತ ರಾಜ್ಯ ಅಧ್ಯಕ್ಷ ಪದವಿಗೆ ಯೋಗ್ಯನೂ ಅಲ್ಲ ಎಂದು ಹೇಳಿದ್ದೆ ಎಂದು ಬರೆದುಕೊಂಡಿದ್ದಾರೆ.
ನವಜೋತ್ ಸಿಂಗ್ ಸಿದ್ದು ಅಮರಿಂದರ್ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ಇಳಿಸಲು ಭಾರೀ ಪ್ರಯತ್ನ ಪಟ್ಟಿದ್ದರು. ಮುಖ್ಯಮಂತ್ರಿ ಬೆನ್ನ ಹಿಂದೆ ಸರಣಿ ಸಭೆಗಳನ್ನು ಆಯೋಜಿಸಿ ನಾಯಕತ್ವ ಬದಲಾವಣೆಯ ಕೂಗು ಏಳುವಂತೆ ಮಾಡಿದ್ದರು. ಈ ಬೆಳವಣಿಗೆಗಳಿಂದ ನೊಂದು ಅಂರಿಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.












































