
ಪಾರ್ಲ್: ದಕ್ಷಿಣ ನೆಲದಲ್ಲಿ ತನ್ನ ಲಯ ಕಳೆದುಕೊಂಡಂತಿರುವ ಭಾರತೀಯ ಕ್ರಿಕೆಟ್ ತಂಡ ಟೆಸ್ಟ್ ಸರಣಿ ಸೋಲಿನ ಬಳಿಕ ಇದೀಗ 3 ಪಂದ್ಯಗಳ ಏಕದಿನ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಿಂದ ಕಳೆದುಕೊಂಡಿದೆ. ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆ.ಎಲ್ ರಾಹುಲ್ ನಾಯಕತ್ವದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 287 ರನ್ ಗಳಿಸಿತು. ಉತ್ತರವಾಗಿ ಸರಾಗ ದಕ್ಷಿಣ ಆಫ್ರಿಕಾ 49ನೇ ಓವರಿನಲ್ಲಿ 3 ನಷ್ಟಕ್ಕೆ ಗುರಿ ತಲುಪಿತು.
ಮೊದಲು ಬ್ಯಾಟಿಂಗ್ ನಡೆಸಿದ ಬಹ್ರಾತದ ಪರ ನಾಯಕ ರಾಹುಲ್ 55 ರನ್ ಹಾಗು ಶಿಖರ್ ಧವನ್ 29 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಆದರೆ ಭಾರತಕ್ಕೆ ಮತ್ತೊಮ್ಮೆ ಮಧ್ಯಮ ಕ್ರಮಾಂಕ ಕೈಕೊಟ್ಟಿತು. ಮಾಜಿ ನಾಯಕ ಕೊಹ್ಲಿ ಸೊನ್ನೆ ಸುತ್ತಿದರೆ, ಶ್ರೇಯಸ್ ಅಯ್ಯರ್ 11, ವೆಂಕಟೇಶ್ ಅಯ್ಯರ್ 22 ರನ್ ಗಳಿಸಲಷ್ಟೇ ಶಕ್ತರಾದರು. ರಿಷಬ್ ಪ್ಯಾಂಟ್ ಮಾತ್ರ ನಾಯಕ ರಾಹುಲ್ ಜತೆಗೆ ಶತಕದ ಜತೆಯಾಟ ನಡೆಸಿ ವಯಕ್ತಿಕ 85 ರನ್ ಗಳಿಸಿದರು. ಕೊನೆಯಲ್ಲಿ ಶಾರ್ದೂಲ್ ಠಾಕೂರ್ ಹಾಗು ಅಶ್ವಿನ್ ಬಿರುಸಿನ ಬ್ಯಾಟಿಂಗ್ ನಡೆಸಿ ತಂಡ ಪೈಪೋಟಿಯ ಮೊತ್ತ ಪೇರಿಸುವಲ್ಲಿ ನೆರವಾದರು. ಠಾಕೂರ್ ಕೊಡುಗೆ 40 ರನ್, ಅಶ್ವಿನ್ ಕೊಡುಗೆ 25 ರನ್.
ಸವಾಲಿನ ಮೊತ್ತ ಬೆನ್ನಟ್ಟಿದ ಆಫ್ರಿಕಾಕ್ಕೆ ಎಲ್ಲೂ ತಡೆ ಒಡ್ಡುವಲ್ಲಿ ಭಾರತದ ಬೌಲರುಗಳು ಸಂಪೂರ್ಣವಾಗಿ ವಿಫಲರಾದರು. ಸುಲಭವಾಗಿ ಬ್ಯಾಟ್ ಬೀಸುತಾ ಸಾಗಿದ ಆಫ್ರಿಕಾ ಆಟಗಾರರು 49ನೇ ಓವರಿನಲ್ಲಿ ನಿಗದಿತ ಗುರಿ ತಲುಪಿ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡರು.












































