
ಹೊಸದಿಲ್ಲಿ: ಸಿಂಧ್ ಪ್ರಾಂತ್ಯದ ಥಾರ್ಪಾರ್ಕರ್ ಜಿಲ್ಲೆಯ ಖಾತ್ರಿ ಮೊಹಲ್ಲಾದ ತೆಹ್ ಮಿಥಿಯಲ್ಲಿರುವ ಹಿಂಗ್ಲಾಜ್ ಮಾತಾ ಮಂದಿರವನ್ನು ಪಾಕಿಸ್ತಾನದ ಇಸ್ಲಾಮಿಸ್ಟ್ ಮತಾಂಧರು ಭಾನುವಾರ ಧ್ವಂಸಗೊಳಿಸಿದ್ದಾರೆ. ಪಾಕಿಸ್ತಾನದಲ್ಲಿ ಕಳೆದ 22 ತಿಂಗಳ ಅವಧಿಯಲ್ಲಿ ಹಿಂದೂ ದೇಗುಲಗಳ ಮೇಲೆ ನಡೆದ 11ನೇ ದಾಳಿ ಇದಾಗಿದೆ.
ಪಾಕಿಸ್ತಾನದ ಹಿಂದೂ ಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷ ಕ್ರಿಶೇನ್ ಶರ್ಮಾ ಅವರು ಸ್ಥಳಕ್ಕಾಗಮಿಸಿ ಮಾಧ್ಯಮಗಳೊಂದಿಗೆ ಸಂವಾದದಲ್ಲಿ ಇಸ್ಲಾಂ ಉಗ್ರಗಾಮಿಗಳು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಮತ್ತು ಪಾಕಿಸ್ತಾನಿ ಸರ್ಕಾರಕ್ಕೆ ಹೆದರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಸ್ಥಳೀಯ ಹಿಂದೂ ಮುಖಂಡರು ಈ ವಿಚಾರವಾಗಿ ಪ್ರತಿಭಟನೆ ನಡೆಸಿದರು. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಹಲವಾರು ಸಂದರ್ಭಗಳಲ್ಲಿ ತಮ್ಮ ದೇಶದ ಅಲ್ಪಸಂಖ್ಯಾತ ಸಮುದಾಯಗಳನ್ನು ರಕ್ಷಿಸಲು ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬ ಕೂಗು ಪಾಕಿಸ್ತಾನದ ಹಿಂದೂಗಳಲ್ಲಿ ಕೇಳಿಬರುತ್ತಿದೆ.
2020ರ ಡಿಸೆಂಬರ್ನಲ್ಲಿ, ಸ್ಥಳೀಯ ಮುಸ್ಲಿಂ ಧರ್ಮಗುರುಗಳ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಮುಸ್ಲಿಂ ಜನರ ಗುಂಪು ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕರಕ್ ಜಿಲ್ಲೆಯಲ್ಲಿ ಹಿಂದೂ ದೇವಾಲಯವನ್ನು ನಾಶಪಡಿಸಿ ಬೆಂಕಿ ಹಚ್ಚಿತ್ತು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊ ಕ್ಲಿಪ್ ನಲ್ಲಿ ಮತಾಂಧ ಗುಂಪೊಂದು ದೇವಾಲಯದ ಗೋಡೆಗಳು ಮತ್ತು ಮೇಲ್ಛಾವಣಿಯನ್ನು ಧ್ವಂಸಗೊಳಿಸುವುದನ್ನು ತೋರಿಸಿದೆ. ಹೀಗೆ ಕಳೆದ 22 ತಿಂಗಳ ಅವಧಿಯಲ್ಲಿ ಈ ರೀತಿಯ 11 ಧಾಳಿಗಳು ಪಾಕಿಸ್ತಾನದ ಹಿಂದೂ ಆಲಯಗಳ ಮೇಲೆ ನಡೆದಿವೆ.
ಪಾಕ್ ಸರಕಾರ ಹಲವಾರು ಸಂದರ್ಭಗಳಲ್ಲಿ ದೇಶದ ಅಲ್ಪಸಂಖ್ಯಾತ ಸಮುದಾಯಗಳ ಹಿತಾಸಕ್ತಿ ಕಾಪಾಡುವುದಾಗಿ ಭರವಸೆ ನೀಡಿದೆ. ಆದರೂ ಅಲ್ಪಸಂಖ್ಯಾತರ ಮೇಲಿನ ನಿರಂತರ ದಾಳಿಗಳು ಮುಂದುವರೆದಿದ್ದು ಪಾಕ್ ಸರ್ಕಾರದ ಬದ್ಧತೆಯನ್ನು ಅನುಮಾನದಿಂದ ನೋಡುವಂತಾಗಿದೆ.
ಇಸ್ಲಾಮಾಬಾದ್ ತನ್ನ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಮಾಡುತ್ತಿದೆ. ವಿವಿಧ ರೀತಿಯ ಉದ್ದೇಶಿತ ಹಿಂಸಾಚಾರ, ಸಾಮೂಹಿಕ ಹತ್ಯೆಗಳು, ಕಾನೂನುಬಾಹಿರ ಹತ್ಯೆಗಳು, ಅಪಹರಣ, ಅತ್ಯಾಚಾರ, ಇಸ್ಲಾಂಗೆ ಬಲವಂತದ ಮತಾಂತರ ಮುಂತಾದವುಗಳನ್ನು ಪಾಕ್ ಹಿಂದೂಗಳು ಹಾಗು ಕ್ರಿಶ್ಚಿಯನ್ನರು ಎದುರಿಸುತ್ತಿದ್ದಾರೆ. ಪಾಕಿಸ್ತಾನಿ ಹಿಂದೂಗಳು, ಕ್ರಿಶ್ಚಿಯನ್ನರು, ಸಿಖ್ಖರು, ಅಹ್ಮದೀಯರು ಮತ್ತು ಶಿಯಾಗಳು ಈ ಪ್ರದೇಶದಲ್ಲಿ ಅತಿ ಹೆಚ್ಚು ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಾಗಿದ್ದಾರೆ.
ಪಾಕಿಸ್ತಾನದ ಅಲ್ಪಸಂಖ್ಯಾತರ ಹಕ್ಕುಗಳ ಆಯೋಗದ ಇತ್ತೀಚಿನ ವರದಿಯು ದೇಶದ ಅತ್ಯಂತ ಪೂಜ್ಯ ಹಿಂದೂ ತಾಣಗಳ ನೀರಸ ಚಿತ್ರವನ್ನು ಬಹಿರಂಗಪಡಿಸಿದೆ ಮತ್ತು ಅಲ್ಪಸಂಖ್ಯಾತ ಸಮುದಾಯದ ಪ್ರಾಚೀನ ತಾಣಗಳನ್ನು ನಿರ್ವಹಿಸುವ ಜವಾಬ್ದಾರಿಯುತ ಶಾಸನಬದ್ಧ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ. ಪಾಕಿಸ್ತಾನ ಸರ್ಕಾರದ ಶಾಸನಬದ್ಧ ಮಂಡಳಿಯಾದ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ ಅಲ್ಪಸಂಖ್ಯಾತ ಸಮುದಾಯದ ಪ್ರಾಚೀನ ಮತ್ತು ಪವಿತ್ರ ಸ್ಥಳಗಳನ್ನು ನಿರ್ವಹಿಸಲು ವಿಫಲವಾಗಿದೆ ಎಂದು ವರದಿ ಹೇಳುತ್ತದೆ.












































