
ಬಂಟ್ವಾಳ: ಆಟೋ ಗ್ಯಾಸ್ ಸಿಲಿಂಡರ್ ಅನ್ನು ಗುಜರಿ ವ್ಯಾಪಾರಿಯೋರ್ವರು ಕತ್ತರಿಸುತ್ತಿದ್ದ ವೇಳೆ ಸಿಲಿಂಡರ್ ಸ್ಪೋಟಗೊಂಡು ಪಕ್ಕದಲ್ಲಿ ನಿಂತಿದ್ದ ಆಟೋ ರಿಕ್ಷಾ ಸಂಪೂರ್ಣ ಸುತ್ತು ಕರಕಲಾದ ಘಟನೆ ಬಂಟ್ವಾಳದ ಫರಂಗಿಪೇಟೆಯ ಅಮೈಮಾರ್ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.
ಘಟನೆಯಿಂದಾಗಿ ಗ್ಯಾಸ್ ಸಿಲಿಂಡರ್ ಕತ್ತರಿಸುತ್ತಿದ್ದ ಬಂಟ್ವಾಳ ಕಾರಾಜೆ ನಿವಾಸಿ ಅಬ್ದುಲ್ ರಜಾಕ್ (62) ಗಾಯಗೊಂಡಿದ್ದಾರೆ. ಅಮೈಮಾರಿನ ಗುಜರಿ ವ್ಯಾಪಾರೀ ತಸ್ಲೀಮ್ ಅವರ ಮನೆಯಲ್ಲಿ ಗುಜರಿಗೆ ಹಾಕಲಾಗಿದ್ದ ಆಟೋ ಗ್ಯಾಸ್ ಸಿಲಿಂಡರ್ ಇತ್ತು. ಆ ಸಿಲಿಂಡರ್ ಅನ್ನು ಕತ್ತರಿಸಲು ಕಾರಾಜೆಯ ಅಬ್ದುಲ್ ರಜಾಕ್ ಅವರು ತಮ್ಮ ಆಟೋ ರಿಕ್ಷಾದಲ್ಲಿ ಬಂದಿದ್ದರು. ಸಿಲಿಂಡರ್ ಕತ್ತರಿಸುತ್ತಿದ್ದ ವೇಳೆ ಸ್ಪೋಟಗೊಂಡಿದೆ ಎನ್ನಲಾಗಿದೆ. ಸ್ಫೋಟದಿಂದಾಗಿ ಪಕ್ಕದಲ್ಲೇ ನಿಲ್ಲಿಸಿದ್ದ ಆಟೋ ರಿಕ್ಷಾ ಭಸ್ಮವಾಗಿದ್ದು, ಅಕ್ಕಪಕ್ಕದ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.
ಗಾಯಗೊಂಡ ಅಬ್ದುಲ್ ರಜಾಕ್ ಅವರನ್ನು ಬಂಟ್ವಾಳದ ತುಂಬೆ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.












































