
ಬೆಂಗಳೂರು: ಸಮವಸ್ತ್ರ ನಿಯಮವಿದ್ದರೂ ಹಿಜಾಬ್ ಧರಿಸಲು ಅವಕಾಶ ಕೊಡಬೇಕೆಂದು ಉಡುಪಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ ತ್ರಿಸದಸ್ಯ ಪೀಠ ವಿಚಾರಣೆಯನ್ನು ನಾಳೆಗೆ (ಬುಧವಾರಕ್ಕೆ) ಮುಂದೂಡಿದೆ.
ಇಂದೂ ಕೂಡ ದೀರ್ಘ ವಿಚಾರಣೆ ನಡೆಸಿದ ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್, ನ್ಯಾಯಮೂರ್ತಿ ಖಾಜಿ ಜೇಬುನ್ನೀಸಾ ಮೊಹಿಯುದ್ದೀನ್ ಅವರುಗಳ ನೇತೃತ್ವದ ತ್ರಿಸದಸ್ಯ ಪೀಠ ಪ್ರಕರಣದ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಹಿಜಾಬ್ ಬೇಕೆಂಬ ಅರ್ಜಿದಾರರ ಪರ ವಕೀಲರಾದ ದೇವದತ್ ಕಾಮತ್ ತಮ್ಮ ವಾದ ಮಂಡಿಸಿದರು.
ಹೈಕೋರ್ಟ್ ಮಧ್ಯಂತರ ಆದೇಶ ಇದ್ದರೂ ಇಂದು ಕೂಡ ಹಲವು ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬಂದಿದ್ದರು. ಅಂತವರನ್ನು ಮನೆಗೆ ವಾಪಸು ಕಳುಹಿಸಲಾಗಿದೆ. ಇನ್ನು ಕೆಲವು ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರು ಶಾಲೆಗಳ ಬಳಿ ಬಂದು ತರಗತಿಗಳಿಗೆ ಬಿಡಬೇಕು ಎಂದು ಗಲಾಟೆ ಮಾಡುತ್ತಿದ್ದರು. ತರಗತಿಗಳಿಗೆ ಸೇರಿಸದೆ ಇದ್ದ ಕಾರಣ ತಮ್ಮ ತಮ್ಮ ಮಕ್ಕಳನ್ನು ಮನೆಗೆ ವಾಪಸು ಕರೆದುಕೊಂಡು ಹೋಗಿದ್ದಾರೆ.












































