
ತೆಲಂಗಾಣ: 2 ನೇ ತರಗತಿ ಕಲಿಯುತ್ತಿರುವ ಹುಡುಗನೋರ್ವ ಶಿಕ್ಷಕರೊಬ್ಬರು ತನಗೆ ಹೊಡೆದ ಕಾರಣಕ್ಕೆ ಅವರನ್ನು ಬಂಧಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ತೆಲಂಗಾಣ ರಾಜ್ಯದ ಶಾಲೆಯೊಂದರಲ್ಲಿ ನಡೆದಿದೆ. ಅನಿಲ್ ನಾಯ್ಕ್ ಎಂಬ ಎರಡನೇ ತರಗತಿ ಹುಡುಗ, ಮಹಬೂಬಾಬಾದ್ನ ಪೊಲೀಸ್ ಠಾಣೆಯ ಬಾಗಿಲು ತಟ್ಟಿ ತನ್ನ ಶಿಕ್ಷಕನ ಬಗ್ಗೆ ದೂರು ನೀಡಿದ್ದಾನೆ. ತನ್ನ ಶಿಕ್ಷಕರನ್ನು ಬಂಧಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ. ಈತನ ಮನವಿ ಕೇಳಿ ಠಾಣಾ ಇನ್ಸ್ಪೆಕ್ಟರ್ ಒಂದು ಕ್ಷಣ ದಂಗಾಗಿದ್ದಾರೆ.
ಪೊಲೀಸ್ ಠಾಣೆಗೆ ಬಂದಿದ್ದ ಹುಡುಗನನ್ನು ಮಹಿಳಾ ಪೊಲೀಸ್ ಇನ್ಸ್ಪೆಕ್ಟರ್ ರಮಾದೇವಿ ಅವರು ಪೊಲೀಸ್ ಠಾಣೆಗೆ ಏಕೆ ಬಂದಿದ್ದೀ ಎಂದು ಮಗುವನ್ನು ಕೇಳಿದ್ದಾರೆ. ಆಗ ಆತ ಶಿಕ್ಷಕರು ತನ್ನನ್ನು ಹೊಡೆದಿದ್ದಾರೆ ಎಂದು ಉತ್ತರಿಸಿದ್ದಾನೆ. ಏಕೆ ಹೊಡೆದಿದ್ದಾರೆ ಎಂದು ಇನ್ಸ್ಪೆಕ್ಟರ್ ಕೇಳಿದಾಗ, ಸರಿಯಾಗಿ ಓದದ ಕಾರಣ ಎಂದು ಹೇಳಿದ್ದಾನೆ.
ಅನಿಲ್ ನಾಯ್ಕ್ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಬಯ್ಯಾರಂ ಮಂಡಲದ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿಯಾಗಿದ್ದಾನೆ. ಈತನ ವರ್ತನೆಯಿಂದ ಆಘಾತಕ್ಕೊಳಗಾದ ಮಹಿಳಾ ಪೊಲೀಸ್ ಇನ್ಸ್ಪೆಕ್ಟರ್ ರಮಾದೇವಿ, ಆತನನ್ನು ಅವನ ಶಾಲೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಆದರೆ ಆ ವಿದ್ಯಾರ್ಥಿ ತನ್ನ ಹಠ ಬಿಡದೆ ಕುಳಿತಿದ್ದ. ಕೊನೆಗೆ ಕೌನ್ಸೆಲಿಂಗ್ ನಡೆಸಿ ವಿಷಯವನ್ನು ಬಗೆಹರಿಸಲಾಗಿದೆ.












































