
ಕೊಲಂಬೊ: ಭಾರತದ ನೆರೆಯ ದೇಶದಲ್ಲಿ ಆಗುತ್ತಿರುವ ಬದಲಾವಣೆಗಳು ಮತ್ತಷ್ಟು ಭೀಕರವಾಗುತ್ತಿದ್ದು ಪ್ರಧಾನಿ ರಾಜಪಕ್ಷೆ ರಾಜೀನಾಮೆ ನೀಡಿದ ಬಳಿಕವೂ ಹಿಂಸಾಚಾರ ಮುಂದುವರೆದಿದೆ. ಹಿಂಸಾಚಾರದಲ್ಲಿ ಓರ್ವ ಸಂಸದನೂ ಸೇರಿ ಸತ್ತವರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದ್ದು ಗಾಯಾಳುಗಳ ಸಂಖ್ಯೆ 200ಕ್ಕೆ ಮುಟ್ಟಿದೆ. ಅಪರೂಪಕ್ಕೆ ಅಪರೂಪದ ಘಟನೆಯಲ್ಲಿ ಪ್ರತಿಭಟನಾಕಾರರ ಗುಂಪು ಪ್ರಧಾನಿ ಮಹಿಂದ್ರಾ ರಾಜಪಕ್ಷೆಗೆ ಸೇರಿದ ಮನೆಯ ಮೇಲೆ ಧಾಳಿ ಮಾಡಿ ಬೆಂಕಿ ಹಚ್ಚಿ ಸುಟ್ಟು ಹಾಕಿದೆ.
ಪ್ರಧಾನಿ ಮನೆ ಸೇರಿದಂತೆ ಹಲವು ರಾಜಕೀಯ ನಾಯಕರ ಮನೆಗಳ ಮೇಲೆ ಧಾಳಿ ಮಾಡಿದ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ದ್ವೀಪ ರಾಷ್ಟ್ರದಾದ್ಯಂತ ಕರ್ಫ್ಯೂ ಜಾರಿ ಮಾಡಲಾಗಿದೆ. ಮಹಿಂದಾ ರಾಜಪಕ್ಸೆ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕವೂ ದೇಶದಲ್ಲಿ ಶಾಂತಿ ನೆಲೆಗೊಳ್ಳುವಲ್ಲಿ ವಿಫಲವಾಗಿದೆ. ದೇಶದಲ್ಲಿ ಹಿಂಸಾಚಾರ ಮತ್ತು ಸೇಡಿನ ಕೃತ್ಯಗಳನ್ನು ನಿಲ್ಲಿಸುವಂತೆ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಜನರನ್ನು ಒತ್ತಾಯಿಸಿದ್ದಾರೆ.
ಶ್ರೀಲಂಕಾದ ಅಟಾರ್ನಿ ಜನರಲ್ ದೇಶದಲ್ಲಿ ಸರ್ಕಾರದ ವಿರೋಧಿ ಮತ್ತು ಪರ ಪ್ರತಿಭಟನಾಕಾರರ ನಡುವಿನ ಹಿಂಸಾತ್ಮಕ ಘರ್ಷಣೆಗಳ ಬಗ್ಗೆ ತನಿಖೆ ನಡೆಸುವಂತೆ ಪೊಲೀಸ್ ಮುಖ್ಯಸ್ಥರನ್ನು ಕೇಳಿದ್ದಾರೆ. ಪ್ರಧಾನಿ ರಾಜಪಕ್ಸೆ ಕುಟುಂಬದ ಬೆಂಬಲಿಗರು ದೇಶದಿಂದ ಪಲಾಯನ ಮಾಡುವುದನ್ನು ತಡೆಯಲು ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಕೊಲಂಬೊದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ಚೆಕ್ಪೋಸ್ಟ್ ಸ್ಥಾಪಿಸಿ ಕಾಯುತ್ತಿದ್ದಾರೆ.












































