
ಬೆಂಗಳೂರು: ಪರಿಷತ್ ಚುನಾವಣೆಗೆ ನಮ ಪಾತ್ರ ಸಲ್ಲಿಕೆಗೆ ಕೊನೆ ದಿನವಾದ ಇಂದು ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಬಹು ನಿರೀಕ್ಷೆಯಲ್ಲಿದ್ದ ವಿಜಯೇಂದ್ರ ಯಡಿಯೂರಪ್ಪಗೆ ಹೈಕಮಾಂಡ್ ಮತ್ತೆ ಕೈಕೊಟ್ಟಿದ್ದು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಹೇಮಲತಾ ನಾಯಕ್, ಕೇಶವ ಪ್ರಸಾದ್ ಹಾಗು ಛಲವಾದಿ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನೀಡಲಾಗಿದೆ.
ಈ ಹಿಂದೆ ವಿಧಾನಸಭಾ ಚುನಾವಣೆ ಸಂದರ್ಭ ಮೈಸೂರಿನ ವರುಣ ಕ್ಷೇತ್ರದಲ್ಲಿ ಸ್ಪರ್ಧಿಸಿ ಮೈಸೂರು ಭಾಗದಲ್ಲಿ ಪಕ್ಷದ ಬೆಳವಣಿಗೆ ಉದ್ದೇಶಿಸಿದ್ದ ವಿಜಯೇಂದ್ರ ಅವರಿಗೆ ಕೇಂದ್ರ ನಾಯಕರುಗಳು ಕೈ ಕೊಟ್ಟಿದ್ದರು. ಆಗಿನ ಬಿಜೆಪಿ ನಿರ್ಧಾರ ಚುನಾವಣೆ ಬಳಿಕ ಅತೀ ದೊಡ್ಡ ಪ್ರಮಾದ ಎಂದು ಸಾಬೀತಾಗಿತ್ತು ಮತ್ತೆ ನಗೆಪಾಟಲಿಗೂ ಈಡಾಗಿತ್ತು. ಈ ಬಾರಿಯೂ ಕೂಡ ಪರಿಷತ್ ಚುನಾವಣೆ ಟಿಕೆಟ್ ನಿರೀಕ್ಷೆಯಲ್ಲಿದ್ದ ವಿಜಯೇಂದ್ರ ಅವರಿಗೆ ಕೈ ಕೊಡಲಾಗಿದೆ.
ಲಿಂಗಾಯಿತ ಕೋಟಾದಲ್ಲಿ ಲಕ್ಷ್ಮಣ ಸವದಿ, ಮಹಿಳಾ ಕೋಟದಡಿಯಲ್ಲಿ ಕೊಪ್ಪಳ ಮೂಲದ ಲಂಬಾಣಿ ಸಮುದಾಯದ ಹೇಮಲತಾ ನಾಯಕ್, ಹಿಂದುಳಿದ ವರ್ಗ ಕೋಟಾದಲ್ಲಿ ಪಕ್ಷದ ಕಚೇರಿ ಕಾರ್ಯದರ್ಶಿಯಾಗಿದ್ದ ಕೇಶವ ಪ್ರಸಾದ್, ದಲಿತರ ಕೋಟದಲ್ಲಿ ಎಸ್ಸಿ ಘಟಕದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನೀಡಲಾಗಿದೆ. ಇತ್ತೀಚಿಗೆ ಬಿಜೆಪಿ ಸೇರಿದ ಬಸವರಾಜ ಹೊರಟ್ಟಿ ಅವರಿಗೆ ಬಿಜೆಪಿ ವಿಧಾನ ಪರಿಷತ್ನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಟಿಕೆಟ್ ನೀಡಿದೆ.












































