
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಬಂಟ್ವಾಳದ ವಾಮದಪದವಿನ 31 ವರ್ಷದ ಯುವಕನೊಬ್ಬ ಡೆಂಗ್ಯೂಗೆ ದಾರುಣವಾಗಿ ಬಲಿಯಾಗಿದ್ದಾನೆ. ವಾಮದಪದವಿನ ಸಂದೀಪ್ ಪೂಜಾರಿ ಮೃತಪಟ್ಟ ಯುವಕ.
ಸಂದೀಪ್ ಪೂಜಾರಿ ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸಂದೀಪ್ ಮೃತಪಟ್ಟಿದ್ದಾರೆ. ವೃತ್ತಿಯಲ್ಲಿ ಕೃಷಿಕನಾಗಿದ್ದು, ಸಾಮಾಜಿಕ ಕಾರ್ಯಕರ್ತರೂ ಆಗಿದ್ದ ಸಂದೀಪ್ ಪೂಜಾರಿ ಇವರು ಪತ್ನಿ ಹಾಗು ಸಣ್ಣ ಪ್ರಾಯದ ಮಗನನ್ನು ಅಗಲಿದ್ದಾರೆ. ಮೃತರ ತಂದೆ ನಾಟಿ ವೈದ್ಯರಾಗಿದ್ದು, ತಾಯಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಬಂಟ್ವಾಳ ತಾಲೂಕು ಒಂದರಲ್ಲೇ ೧೭ ಪ್ರಕರಣಗಳು ಇವೆ ಎಂದು ಜಿಲ್ಲಾ ಡೆಂಗ್ಯೂ ನಿಯಂತ್ರಣಾಧಿಕಾರಿ ನವೀನ ಚಂದ್ರ ಕುಲಾಲ್ ತಿಳಿಸಿದ್ದಾರೆ.













































