
ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದಲ್ಲಿ ಅಲ್ಲಿನ ಆಡಳಿತವು ಬುಧವಾರ ಹಿಂದೂ ಕಾಶ್ಮೀರಿ ಪಂಡಿತನನ್ನು ಕೊಂದ ಭಯೋತ್ಪಾದಕನ ಮನೆಯನ್ನು ಜಪ್ತಿ ಮಾಡಿದ್ದು, ಆತನ ತಂದೆ ಮತ್ತು ಮೂವರು ಸಹೋದರರನ್ನು ಆತನಿಗೆ ಆಶ್ರಯ ನೀಡಿದ್ದಕ್ಕಾಗಿ ಬಂಧಿಸಲಾಗಿದೆ. ಈ ಮೂಲಕ ಕಠಿಣ ಸಂದೇಶ ರವಾನಿಸಿದೆ.
ಆದಿಲ್ ವಾನಿ ಎಂಬ ಇಸ್ಲಾಂ ಭಯೋತ್ಪಾದಕ ಮಂಗಳವಾರ ಕಾಶ್ಮೀರದ ಶೋಪಿಯಾನ್ನ ತೋಟವೊಂದರಲ್ಲಿ ಹಿಂದೂ ಕಾಶ್ಮೀರಿ ಪಂಡಿತನಾದ ಸುನೀಲ್ ಕುಮಾರ್ ಭಟ್ನನ್ನು ಗುಂಡಿಕ್ಕಿ ಕೊಂದು ನಂತರ ಕುತ್ಪೋರಾದ ತನ್ನ ಮನೆಯಲ್ಲಿ ಆಶ್ರಯ ಪಡೆದಿದ್ದ. ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಭಯೋತ್ಪಾದಕ ವಾನಿ ಪಡೆಗಳ ಮೇಲೆ ಗ್ರೆನೇಡ್ಗಳನ್ನು ಎಸೆದು ಕತ್ತಲಲ್ಲಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಅಲ್-ಬದ್ರ್ ಎಂಬ ಭಯೋತ್ಪಾದಕ ಸಂಘಟನೆ ಸದಸ್ಯನಾಗಿದ್ದಾನೆ ಎಂದು ತಿಳಿದು ಬಂದಿದೆ.
ಉಗ್ರಗಾಮಿ ವಾನಿ ಮನೆಗೆ ಸೀಲ್ ಮಾಡಲಾಗಿದೆ ಎಂದು ಖಚಿತಪಡಿಸಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾಶ್ಮೀರ) ವಿಜಯ್ ಕುಮಾರ್, ಆದಿಲ್ ವಾಣಿ ಮತ್ತು ಆತನ ಸಹಚರರನ್ನು ಬಂಧಿಸಲಾಗುವುದು ಅಥವಾ ಕೊಲ್ಲಲಾಗುವುದು ಎಂದು ಹೇಳಿದ್ದಾರೆ. ಕಳೆದ ತಿಂಗಳು ಪೊಲೀಸರು ಶ್ರೀನಗರದ ಐದು ಮನೆಗಳನ್ನು ಉಗ್ರರ ಅಡಗುತಾಣಗಳಾಗಿ ಬಳಸಲಾಗುತ್ತಿತ್ತು ಮತ್ತು ಅಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಯೋಜಿಸಲಾಗಿದೆ ಎಂದು ಹೇಳಿ ಜಪ್ತಿ ಮಾಡಿ ಸೀಲ್ ಮಾಡಿದ್ದರು. ಇದೇ ರೀತಿಯ ಕಾರಣಗಳನ್ನು ಉಲ್ಲೇಖಿಸಿ ಕಾಶ್ಮೀರ ಪೊಲೀಸರು ಈ ವರ್ಷ ಕಾಶ್ಮೀರದಲ್ಲಿ 10 ಮನೆಗಳನ್ನು ಜಪ್ತಿ ಮಾಡಿದ್ದಾರೆ.
ಮಂಗಳವಾರ ಕಾಶ್ಮೀರದಲ್ಲಿ ನಡೆದ ದಾಳಿಯಲ್ಲಿ ಹಣ್ಣಿನ ಕೃಷಿಕ ಸುನಿಲ್ ಕುಮಾರ್ ಭಟ್ (48) ಎಂಬವರ ಮೇಲೆ ಗುಂಡು ಹಾರಿಸಿ ಸಾಯಿಸಿದ್ದು, ಅವರ ಸಂಬಂಧಿ ಪಿತಾಂಬರನಾಥ್ ಭಟ್ ಗಾಯಗೊಂಡಿದ್ದಾರೆ. ಹತ್ಯೆಗೆ ಕಾರಣರಾದ ಭಯೋತ್ಪಾದಕರನ್ನು ಬಿಡುವುದಿಲ್ಲ ಎಂದು ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದಾರೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL












































