
ಉಡುಪಿ: ಟಿಪ್ಪರ್ ಲಾರಿ ಹಾಗು ಮೋಟಾರು ಬೈಕ್ ಮಧ್ಯೆ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕಿನಲ್ಲಿದ್ದ ಸಹಸವಾರೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ ಘಟನೆ ಉಡುಪಿ ಕಾಪುವಿನ ಉಚ್ಚಿಲದಲ್ಲಿ ನಡೆದಿದೆ.
ಉಚ್ಚಿಲದ ರಾಷ್ಟ್ರೀಯ ಹೆದ್ದಾರಿ 66ರ ರಿಕ್ಷಾ ನಿಲ್ದಾಣ ಬಳಿ ಈ ಘಟನೆ ನಡೆದಿದ್ದು, ಪಡುಬಿದ್ರಿ ಕಂಚಿನಡ್ಕದ ನಿವಾಸಿಯಾಗಿರುವ ಅಯಿಷಾ ನಿಹಾಲಾ (18) ಬಲಿಯಾದ ದುರ್ದೈವಿ. ಈಕೆಗೆ ವಿವಾಹ ನಿಶ್ಚಿತಾರ್ಥವಾಗಿತ್ತು. ಬೈಕ್ ಚಲಾಯಿಸುತ್ತಿದ್ದ ಆಕೆಯ ಭಾವೀ ಪತಿ ಯುವಕ ಬೆಳಪುವಿನ ಮಹಮ್ಮದ್ ಷರೀಫ್ ಗಾಯಗೊಂಡು ಉಡುಪಿ ಸರಕಾರಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಹಮ್ಮದ್ ಷರೀಫ್ ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದು ಈ ಮಂಗಳವಾರ ಊರಿಗೆ ಬಂದಿದ್ದ ಎನ್ನಲಾಗಿದೆ. ಇವರಿಬ್ಬರ ಮಾಡುವೆ ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿತ್ತು. ಮೃತ ನಿಹಾಲಾ ತಂದೆ, ತಾಯಿ, ಅಕ್ಕ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ
ಆಯಿಷಾ ನಿಹಾಳ ಹಾಗು ಷರೀಫ್ ಉಡುಪಿಯಲ್ಲಿ ಬಟ್ಟೆಬರೆ ಖರೀದಿಸಿ ಪಡುಬಿದ್ರಿಯತ್ತ ವಾಪಸಾಗುತ್ತಿದ್ದರು. ಆ ಸಂದರ್ಭ ಉಚ್ಚಿಲದ ರಿಕ್ಷಾ ನಿಲ್ದಾಣ ಬಳಿ ಹಿಂಬದಿಯಿಂದ ಬಂದ ಟಿಪ್ಪರ್ ಬೈಕಿಗೆ ಡಿಕ್ಕಿ ಹೊಡೆದಿದೆ. ಅಪಘಾತಕ್ಕೆ ಟಿಪ್ಪರ್ ಚಾಲಕ ಮಹಮ್ಮದ್ ಝಿಯಾದ್ ನ ಅಜಾರೂಕತೆಯೇ ಕಾರಣ ಎಂದು ತಿಳಿದು ಬಂದಿದೆ. ಟಿಪ್ಪರ್ ಚಾಲಕ ಝಿಯಾದ್ ಬಳಿ ಘನ ವಾಹನ ಚಾಲನ ಪರವಾನಿಗೆ ಕೂಡ ಇರಲಿಲ್ಲ ಎಂದು ತಿಳಿದು ಬಂದಿದೆ.
ಅಪಘಾತ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL












































