
ಬಂಟ್ವಾಳ: ಚುನಾವಣೆ ಸಮೀಪಿಸುತ್ತಿದ್ದಂತೆ ಬಂಟ್ವಾಳ ಕ್ಷೇತ್ರ ರಾಜಕೀಯವಾಗಿ ಗರಿಗೆದರಿದ್ದು ಆರೋಪ ಪ್ರತ್ಯಾರೋಪಗಳು ಆರಂಭವಾಗಿದೆ. ಬಂಟ್ವಾಳವನ್ನು ಹೆಚ್ಚು ಅವಧಿಗೆ ಶಾಸಕರಾಗಿ ಪ್ರತಿನಿಧಿಸಿದ ಮಾಜಿ ಸಚಿವ ರಮಾನಾಥ ರೈ ಅವರು ಬಿಜೆಪಿ ಮೇಲೆ ಹರಿಹಾಯ್ದಿದ್ದು, “ಕಳೆದ ಬಾರಿ ಚುನಾವಣೆಯಲ್ಲಿ ನನ್ನ ಸೋಲಿಗೆ ವ್ಯಾಪಕ ಅಪ ಪ್ರಚಾರವೇ ಕಾರಣವಾಯಿತು. ಮತೀಯವಾಗಿ ಧ್ರುವೀಕರಣ ಮಾಡಿದರು. ಆ ಮೂಲಕ ರಾಜಕೀಯವಾಗಿ ಮತಗಳು ವಿಭಜನೆಗೊಳ್ಳುವಂತೆ ಮಾಡಿ ಜಯಿಸಿದರು. ಈಗ ಬಂಟ್ವಾಳ ಶಾಂತಿಯುತವಾಗಿದೆ ಎನ್ನುತ್ತಾರೆ. ಆದರೆ ಈ ಹಿಂದೆ ಗಲಾಟೆ ಮಾಡಿದವರು ಯಾರು? ಮತೀಯ ಹೆಸರಲ್ಲಿ ರಾಜಕೀಯ ವಿಚಾರದಲ್ಲಿ ಹತ್ಯೆಗಳು ನಡೆದವು. ಹಿಂದೂ ಹಾಗೂ ಮುಸ್ಲಿಮರ ಹತ್ಯೆಯಾದವು. ಅದರೆ, ಎಲ್ಲಾ ಕೊಲೆ ಪ್ರಕರಣಗಳಲ್ಲಿ ಕಾಂಗ್ರೆಸ್ಸಿಗನ ಹೆಸರಿಲ್ಲ” ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮಾನಾಥ ರೈ ಅವರು, “ಕರ್ಫ್ಯೂ, 144 ಸೆಕ್ಷನ್ ಉಲ್ಲಂಘಿಸಿ ಪ್ರತಿಭಟನೆ ಮಾಡಿದವರು ಯಾರು? ಕೊಲೆ ಆರೋಪಿಗಳ ಜೊತೆಯಲ್ಲಿ ತಿರುಗಾಟ ಮಾಡುತ್ತಿದ್ದವರು ಯಾರು? ಹಿಂದೆ ಮತೀಯ ಹೆಸರಲ್ಲಿ ಹತ್ಯೆಯನ್ನು ಕಾಂಗ್ರೆಸ್ ಮಾಡಿರಲಿಲ್ಲ. ಹತ್ಯೆ ಆರೋಪಿಗಳೊಂದಿಗೆ ತಿರುಗಾಟ ಮಾಡಿದವರು ಯಾರು? ರಮಾನಾಥ ರೈ ಅಲ್ಲ” ಎಂದು ಬಿಜೆಪಿ ನಡೆಯನ್ನು ಟೀಕಿಸಿದರು.
“ನಾವು ಮರಳು ಮಾಫಿಯ ಪರಎಂದು ಬಿಜೆಪಿಗರು ಆರೋಪಿಸುತ್ತಾರೆ. ಆದರೆ ಮರಳು ಮಾಫಿಯಾ ಜೊತೆಗೆ ಸಣ್ಣ ಸಂಪರ್ಕ ಇದ್ದರೂ ತೋರಿಸಲಿ. ಹಾಲಿ ಶಾಸಕರ ಕಾರ್ಯಕ್ರಮದ ಬ್ಯಾನರ್ ಮರಳು ಮಾಫಿಯಾ ಹಾಗೂ ಇಸ್ಪೀಟ್ ಕ್ಲಬ್ನವರದ್ದು. ಬಂಟ್ವಾಳ ತಾಲೂಕಿನದ್ಯಾಂತ ಬ್ಯಾನರ್ ಕಟೌಟ್ಗಳು ಈಗ ರಾರಾಜಿಸುತ್ತಿವೆ” ಎಂದು ಪರೋಕ್ಷವಾಗಿ ಬಿಜೆಪಿಯ ಮರಳು ಮಾಫಿಯಾ ಸಂಪರ್ಕದ ಬಗ್ಗೆ ರೈ ಹೇಳಿದರು.
ಚುನಾವಣೆ ಘೋಷಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು ಬಂಟ್ವಾಳದ ಚುನಾವಣಾ ಕಣ ಈ ಬಾರಿ ಹಿಂದೆಂದಿಗಿಂತಲೂ ರೋಚಕ ಹಂತ ತಲುಪುವ ಸೂಚನೆ ಸಿಕ್ಕಿದೆ.
ಸುದ್ದಿಯನ್ನು ನಿಮ್ಮ ವಾಟ್ಸಪ್ ನಲ್ಲಿ ಪಡೆಯಲು ನಮ್ಮ ಗುಂಪಿಗೆ ಸೇರಿರಿ https://chat.whatsapp.com/CMUDdTXoFVn7atm3zHYGrd