
ಬೆಂಗಳೂರು/ಮಂಗಳೂರು/ಉಡುಪಿ/ಕಾರವಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಚೊಚ್ಚಲ ರಾಜ್ಯ ಬಜೆಟ್ ನಲ್ಲಿ ನ್ನುಮೀನುಗಾರರಿಗೆ ಭರ್ಜರಿ ಕೊಡುಗೆ ನೀಡಲಾಗಿದೆ. ನಿರಾಶ್ರಿತ ಮೀನುಗಾರರಿಗೆ 5,000 ಮನೆಗಳನ್ನು ನಿರ್ಮಿಸುವ ಯೋಜನೆಯನ್ನು ರಾಜೀವ್ ಗಾಂಧಿ ಆವಾಸ್ ಯೋಜನೆಯಡಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.
ಜತೆಗೆ ಮೀನುಗಾರರ ಆದಾಯ ಹೆಚ್ಚಳಕ್ಕೆ ಮತ್ತು ಆಳ ಸಮುದ್ರ ಮೀನುಗಾರಿಕೆಗೆ ಪ್ರೋತ್ಸಾಹ ನೀಡಲು 100 ಆಳ ಸಮುದ್ರ ಮೀನುಗಾರಿಕೆ ಬೋಟ್ ಗಳನ್ನು ಮತ್ಸ್ಯ ಶ್ರೀ ಯೋಜನೆಯಡಿ, ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಸಹಭಾಗಿತ್ವದಲ್ಲಿ ಸೇರ್ಪಡೆಗೊಳಿಸಲಾಗುವುದು ಎಂದು ಬೊಮ್ಮಾಯಿ ಘೋಷಿಸಿದ್ದಾರೆ.
ಸಮುದ್ರ ಕೊರೆತ ತಡೆಗೆ ಹೊಸ ತಂತ್ರಜ್ಞಾನ: ಕರಾವಳಿ ಜಿಲ್ಲೆಗಳಲ್ಲಿ ಸಮುದ್ರದ ಕೊರೆತದಿಂದ ಪ್ರತಿ ವರ್ಷ ಅಪಾರ ಹಾನಿಯುಂಟಾಗುತ್ತಿದ್ದು ಪ್ರತಿ ವರ್ಷ ಆಸ್ತಿ ಪಾಸ್ತಿ ನಾಶ, ಜೀವ ಹಾನಿ ವರದಿಯಾಗುತ್ತಿವೆ. ಸಮುದ್ರ ಕೊರೆತ ತಡೆಗೆ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ.
ಮಂಗಳೂರು ಬಂದರು ಸಮಗ್ರ ಅಭಿವೃದ್ಧಿ ಹಾಗು ವಿಸ್ತರಣೆಗೆ 350 ಕೋಟಿ ಮೀಸಲಿಡಲಾಗಿದೆ.