Coastal

ಮಂಗಳೂರು: ರಸ್ತೆ ಮಧ್ಯೆ ತೋಡಲಾದ ಗುಂಡಿಗೆ ಬಿದ್ದ ಕಾರು, ನಗರ ರಸ್ತೆಗಳಲ್ಲಿ ಸಂಚರಿಸುವಾಗ ಇರಲಿ ಎಚ್ಚರ

ಮಂಗಳೂರು: ನಗರದಲ್ಲಿ ಅಲ್ಲಲ್ಲಿ ರಸ್ತೆ ಕಾಮಗಾರಿ, ರಸ್ತೆ ಅಗೆದು ಚರಂಡಿ ಕಾಮಗಾರಿಗಳು, ಗ್ಯಾಸ್ ಲೈನ್ ಕಾಮಗಾರಿಗಳು ನಡೆಯುತ್ತಿದ್ದು ಕೆಲ ರಸ್ತೆಗಳಲ್ಲಿ ಸಂಚಾರ ದುಸ್ತರವಾಗಿದೆ. ಈ ರೀತಿಯ ಕಾಮಗಾರಿಗಾಗಿ ದೊಡ್ಡದಾಗಿ ತೋಡಿದ್ದ ಗುಂಡಿಗೆ ಕಾರೊಂದು ಬಿದ್ದು ತಲೆ ಕೆಳಗಾಗಿ ನಿಂತ ಘಟನೆ ಮಂಗಳೂರಿನ ಕೊಡಿಯಾಲ್ ಗುತ್ತು ಪ್ರದೇಶದಲ್ಲಿ ನಡೆದಿದೆ.

ಇಂದು ಬೆಳಗ್ಗೆ 9:45 ರ ಸುಮಾರಿಗೆ ಕಾರೊಂದು ಕೊಡಿಯಾಲ್ ಗುತ್ತುವಿನ ವಿಶಾಲ್ ನರ್ಸಿಂಗ್ ಹೋಮ್ ಹಿಂಭಾಗದ ರಸ್ತೆಯಲ್ಲಿ ಸಾಗುತ್ತಿದ್ದಾಗ ರಸ್ತೆ ಮಧ್ಯೆ ಚರಂಡಿ ಕಾಮಗಾರಿಗಾಗಿ ತೋಡಿದ್ದ ಬೃಹತ್ ಆಕಾರದ ಗುಂಡಿಗೆ ಬಿದ್ದಿದೆ. ಗುಂಡಿಯ ಸುತ್ತ ಯಾವುದೇ ಸೂಚನಾ ಫಲಕ ಅಥವಾ ರಸ್ತೆ ತಡೆಗಳನ್ನು ಇಡದೆ ಇದ್ದ ಪರಿಣಾಮ ಈ ಅವಘಡ ಸಂಭವಿಸಿದೆ. ಕಾರಿನಲ್ಲಿ ಒಬ್ಬರೇ ಇದ್ದು ಹಿರಿಯ ನಾಗರಿಕರೊಬ್ಬರು ಕಾರನ್ನು ಚಲಾಯಿಸುತ್ತಿದ್ದರು. ಅದೃಷ್ಟವಶಾತ್ ಯಾವುದೇ ಗಾಯಗಳು ಆಗಿಲ್ಲ.

ಬೇಕಾಬಿಟ್ಟಿ ಕಾಮಗಾರಿ ಕೈಗೊಳ್ಳುತ್ತಿರುವ ಕುರಿತು ಮಂಗಳೂರು ನಗರದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು ನಗರದ ಹಲವು ರಸ್ತೆಗಳಲ್ಲಿ ಅಗೆದು ಹಾಕಿರುವ ಕಾರಣ ಸಂಚಾರ ದುಸ್ತರವಾಗಿದೆ. ಅಗೆದ ನಂತರ ಗುಂಡಿಗಳನ್ನು ಮುಚ್ಚಿದ ಬಳಿಕ ಕೂಡ ಏರು ತಗ್ಗುಗಳು ನಿರ್ಮಾಣವಾಗುವ ಕಾರಣ ರಸ್ತೆ ಸಂಚಾರ ಕಷ್ಟಕರವಾಗುತ್ತಿದೆ. ಹೆಚ್ಚಿನ ಕಡೆಗಳಲ್ಲಿ ತಡೆ ಬೇಲಿ ಕೂಡ ಇಡದೆ ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಇದಕ್ಕೂ ನಮಗೂ ಸಂಬಂಧ ಇಲ್ಲವೆಂಬಂತೆ ವರ್ತಿಸುತ್ತಿದ್ದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

Exit mobile version