
ಮಂಗಳೂರು: ಮಂಗಳೂರು ಆಟೋ ಸ್ಫೋಟ ಪ್ರಕರಣ ರೋಚಕ ತಿರುವು ಪಡೆದಿದ್ದು ಇದೊಂದು ಉಗ್ರ ಕೃತ್ಯ ಎಂದು ದೃಢಪಟ್ಟಿದೆ. ಇಂದು ಬೆಳಗ್ಗೆ ಡಿಜಿಪಿ ಪ್ರವೀಣ್ ಸೂದ್ ಅವರು ಉಗ್ರ ಕೃತ್ಯ ಎಂದು ಸ್ಪಷ್ಟ ಪಡಿಸಿದ್ದು, ಕುಕ್ಕರ್ ಟೈಮ್ ಬಾಂಬ್ ತಾಂತ್ರಿಕ ದೋಷದಿಂದ ದಾರಿ ಮಧ್ಯೆ ಸ್ಪೋಟಗೊಂಡಿದೆ ಎಂದು ತಿಳಿದುಬಂದಿದೆ.
ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳೂರು ಪ್ರವಾಸದಲ್ಲಿದ್ದು ಟಾರ್ಗೆಟ್ ಸಿಎಂ ಬೊಮ್ಮಾಯಿ ಆಗಿದ್ದರೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಸಿಎಂ ಮಂಗಳೂರಿನಲ್ಲಿರುವಾಗಲೇ ಬಸ್ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಲು ಉಗ್ರರು ಸಂಚು ರೂಪಿಸಿದ್ದರು ಎನ್ನಲಾಗಿದೆ. ಜನ ಸಂಚಾರ ಜಾಸ್ತಿ ಇರುವ ಮಂಗಳೂರಿನ ಪಂಪ್ವೆಲ್ ವೃತ್ತದ ಬಳಿ ಈ ಕುಕ್ಕರ್ ಬಾಂಬ್ ಸ್ಫೋಟಿಸಲು ಸಂಚು ರೂಪಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ಅನುಮಾನ ವ್ಯಕ್ತಪಡಿಸಿವೆ.
ಆಟೋದಲ್ಲಿದದ್ದದ್ದು ಕುಕ್ಕರ್ ಟೈಮರ್ ಬಾಂಬ್:
ಸ್ಫೋಟವಾದ ಆಟೋದಲ್ಲಿ ಛಿದ್ರವಾದ ಕುಕ್ಕರ್ ಪತ್ತೆಯಾಗಿದ್ದು ಕುಕ್ಕರ್ ನಲ್ಲಿ ಬ್ಯಾಟರಿ, ವಯರ್, ನಟ್, ಬೋಲ್ಟ್, ಎಲೆಕ್ಟ್ರಾನಿಕ್ ಸರ್ಕ್ಯೂಟ್ ಪತ್ತೆಯಾಗಿದೆ. ಇದೊಂದು ಟೈಮ್ ಬಾಂಬ್ ಎನ್ನುವುದು ಪಕ್ಕಾ ಆಗಿದ್ದು ಟೈಮರ್ ಸೆಟ್ ಮಾಡಿ ಬಾಂಬ್ ಸ್ಫೋಟ ಮಾಡಲು ಸಂಚು ರೂಪಿಸಲಾಗಿತ್ತು. ಕೃತ್ಯದ ಬಳಿಕ ನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಶಂಕಿತನ ಮೈಸೂರು ಬಾಡಿಗೆ ರೂಮಿನಲ್ಲಿ ಸ್ಫೋಟಕಗಳು ಪತ್ತೆ:
ಆಟೋದಲ್ಲಿ ಪ್ರಯಾಣಿಸುತ್ತಿದ್ದ ಶಂಕಿತ ಉಗ್ರ ಮೈಸೂರಿನಲ್ಲಿ ಬಾಡಿಗೆ ರೂಮಿನಲ್ಲಿ ವಾಸಿಸುತ್ತಿದ್ದ ಎಂಬುದನ್ನು ಮಂಗಳೂರು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆತ ಪ್ರೇಮ್ರಾಜ್ S/o ಮಾರುತಿ ಎಂಬವರ ಆಧಾರ ಕಾರ್ಡ್ ಅನ್ನು ಪೋರ್ಜರಿಯಾಗಿ ಬಳಸಿ ರೂಮ್ ಪಡೆದಿದ್ದ. ಆದರೆ ಈತನಿಗೂ ವಿಳಾಸಕ್ಕೂ ಯಾವುದೇ ಸಂಬಂಧವಿಲ್ಲ. ಆತ ನಕಲಿ ದಾಖಲೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.
ಶಂಕಿತ ಉಗ್ರನ ಕೊಠಡಿಯಲ್ಲಿ ಸ್ಫೋಟಕ ವಸ್ತುಗಳು, ಸರ್ಕ್ಯೂಟ್ ಬೋರ್ಡ್ಗಳು, ಸಲ್ಫ್ಯೂರಿಕ್ ಆಸಿಡ್, ಇತರ ಕೆಲವು ರಾಸಾಯನಿಕಗಳು, ಸಣ್ಣ ಬೋಲ್ಟ್ಗಳು, ಬ್ಯಾಟರಿಗಳು, ಮೊಬೈಲ್ ಡಿಸ್ಪ್ಲೇಗಳು, ಮರದ ಪುಡಿ, ಅಲ್ಯೂಮಿನಿಯಂ ಫಾಯಿಲ್, ಮಲ್ಟಿಮೀಟರ್, ವೈರ್ಗಳು, ಮಿಕ್ಸರ್ ಜಾರ್ಗಳು, ಪ್ರೆಶರ್ ಕುಕ್ಕರ್ ಸೀಟಿಗಳು ಇತ್ಯಾದಿ ಬಾಂಬ್ ತಯಾರಿಕಾ ಸಾಧನಗಳು ಪತ್ತೆಯಾಗಿವೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL