
ಸುಳ್ಯ: 2019ರ ಸೆಪ್ಟೆಂಬರ್ 3ರಂದು ಹಿಂದೂ ಜಾಗರಣ ವೇದಿಕೆ ಮುಖಂಡ ಕಾರ್ತಿಕ್ ಸುವರ್ಣ ಮೇರ್ಲನನ್ನ ಕಡಿದು ಕೊಂದಿದ್ದ ಆರೋಪಿಗಳಲ್ಲಿ ಒಬ್ಬನಾದ ಚರಣ್ ಎಂಬಾತನನ್ನು ಆತನ ಸುಳ್ಯದಲ್ಲಿನ ಇನ್ನಷ್ಟೇ ಉದ್ಘಾಟನೆ ಆಗಬೇಕಾಗಿದ್ದ ಹೊಸ ಅಂಗಡಿಯಲ್ಲೇ ಕಡಿದು ಕೊಲೆ ಮಾಡಲಾಗಿದೆ.
ಸುಳ್ಯ ತಾಲೂಕಿನ ಪೆರ್ಲಂಪಾಡಿಯಲ್ಲಿ ಹಾಡುಹಗಲೇ ಈ ಘಟನೆ ನಡೆದಿದ್ದು ದುಷ್ಕರ್ಮಿಗಳು ಪುತ್ತೂರು ತಾಲೂಕಿನ ಆರ್ಯಾಪು ನಿವಾಸಿ ಚರಣ್ (28) ಎಂಬಾತನ ಕತ್ತು ಸೀಳಿ, ಕಡಿದು ಕೊಲೆ ಮಾಡಿದ್ದಾರೆ. ಕೊಲೆಯಾದ ಚರಣ್ ಹಿಂಜಾವೇ ಮುಖಂಡ ಕಾರ್ತಿಕ್ ಕೊಲೆ ಪ್ರಕರಣದಲ್ಲಿ ಒಟ್ಟು 3 ಆರೋಪಿಗಳಲ್ಲಿ ಒಬ್ಬನಾಗಿದ್ದ. ಚರಣ್, ಆತನ ಸಹೋದರ ಕಿರಣ್ ಹಾಗು ಪ್ರೀತೇಶ್ ಆ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ಚರಣ್ ಹಾಗು ಕಿರಣ್ 2 ವರ್ಷದ ಹಿಂದೆ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು.
ಚರಣ್ ತನ್ನ ಹೆಂಡತಿಯ ಊರಾದ ಪೆರ್ಲಂಪಾಡಿಯಲ್ಲಿ ಹೊಸ ಮೆಡಿಕಲ್ ಶಾಪ್ ಅನ್ನು ತೆರೆಯುವ ಸಿದ್ಧತೆಯಲ್ಲಿದ್ದ. ನಾಳೆ ಭಾನುವಾರ ಅದರ ಶುಭಾರಂಭ ನಡೆಯಲಿತ್ತು. ಇಂದು ಸಂಜೆ ಅಂಗಡಿಯಲ್ಲಿ ಸಾಮಾನುಗಳನ್ನು ಜೋಡಿಸುತ್ತಿದ್ದ ಸಂದರ್ಭ ಆಗಮಿಸಿದ ಮೂವರು ಅಪರಿಚಿತರು ಚರಣ್ ಮೇಲೆ ಏಕಾಏಕಿ ನಡೆಸಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಚರಣ್ ಅಲ್ಲೇ ಸಾವಿಗೀಡಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸುದ್ದಿಯನ್ನು ನೇರವಾಗಿ ಪಡೆಯಲು, ನಮ್ಮ ವಾಟ್ಸಾಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ :
https://chat.whatsapp.com/CMUDdTXoFVn7atm3zHYGrd












































