Coastal

ಬೆಂಗಳೂರು ಕಂಬಳ ನೋಡಿ ವಾಪಸಾಗುತ್ತಿದ್ದ ಮಂಗಳೂರಿನ ಇಬ್ಬರು ಭೀಕರ ಅಪಘಾತಕ್ಕೆ ಬಲಿ

ತುಮಕೂರು: ಬೆಂಗಳೂರು ಕಂಬಳ ನೋಡಿ ವಾಪಸಾಗುತ್ತಿದ್ದ ಮಂಗಳೂರಿನ ಇಬ್ಬರು ಭೀಕರ ಅಪಘಾತಕ್ಕೆ ಬಲಿಯಾದ ಘಟನೆ ತುಮಕೂರಿನ ಕುಣಿಗಲ್ ಸಮೀಪ ನ.26ರ ಮುಂಜಾನೆ ನಡೆದಿದೆ. ಬೋರ್​​​ವೆಲ್ ಲಾರಿಯೊಂದು ಕಾರಿಗೆ ಡಿಕ್ಕಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಸಾವನ್ನಪ್ಪಿದ್ದಾರೆ.

ಮಂಗಳೂರು ಬಜಪೆ ಮೂಲದ ಕಿಶನ್‌ ಶೆಟ್ಟಿ (20), ದಕ್ಷಿಣ ಕನ್ನಡ ಜಿಲ್ಲೆ ಭಟ್ರತೋಟ ಗ್ರಾಮದ ಫಿಲಿಪ್‌ ನೇರಿ ಲೋಬೋ (32) ಭೀಕರ ಅಪಘಾತಕ್ಕೆ ಬಲಿಯಾದವರು. ತುಮಕೂರಿನ ರಾಜ್ಯ ಹೆದ್ದಾರಿ 33ರಲ್ಲಿ ಕೊತ್ತಗೆರೆ ಹೋಬಳಿ ಚಿಗಣಿಪಾಳ್ಯ ಗ್ರಾಮದ ಬಳಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ನಿತೀಶ ಭಂಡಾರಿ, ಪ್ರೀತಿ ಲೋಬೊ, ಹರೀಶ್ ಎಂಬವರು ತೀವ್ರ ಗಾಯಗಳೊಂದಿಗೆ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದೆ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಕಂಬಳವನ್ನು ನೋಡಿಕೊಂಡು ತಮ್ಮ ಊರಿಗೆ ವಾಪಸಾಗುತ್ತಿದ್ದ ವೇಳೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಇವರು ನೆಲಮಂಗಲ-ಕುಣಿಗಲ್ ಮಾರ್ಗವಾಗಿ ಮಂಗಳೂರಿಗೆ ಪ್ರಯಾಣಿಸಬೇಕಾಗಿದ್ದವರು ರಸ್ತೆ ತಪ್ಪಿ ತುಮಕೂರು ನಗರ ತಲುಪಿದ್ದಾರೆ. ಮತ್ತೆ ಅಲ್ಲಿಂದ ಹೆಬ್ಬೂರು ಮಾರ್ಗವಾಗಿ ಕುಣಿಗಲ್ ನಿಂದ ಮಂಗಳೂರಿಗೆ ಹೋಗುವ ಸಂದರ್ಭ ಘಟನೆ ನಡೆದಿದೆ.

ಕುಣಿಗಲ್‌ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Exit mobile version