
ಉಡುಪಿ : ಮದ್ಯಪಾನ ಮಾಡಿ ವಾಹನ ಚಲಾಯಿಸಿ 2 ಬೈಕ್ ಜಖಂ ಮಾಡಿ ಹಲವರ ಪ್ರಾಣಕ್ಕೆ ಕುತ್ತು ತರಲು ಯತ್ನಿಸಿದ ಘಟನೆ ಉಡುಪಿ ಬೀಡಿನಗುಡ್ಡೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ಕುಡಿದು ವಾಹನ ಚಲಾಯಿಸಿದ ಟೆಂಪೋ ಚಾಲಕ ಎರಡು ದ್ವಿಚಕ್ರ ವಾಹನಗಳನ್ನು ತನ್ನ ಟೆಂಪೋದ ಅಡಿಗೆ ಹಾಕಿ ರಾದ್ಧಾಂತ ಮಾಡಿದ್ದಾನೆ.
ಉಡುಪಿಯ ಡಯಾನ ಕುಕ್ಕಿಕಟ್ಟೆ ನಿವಾಸಿಯಾಗಿರುವ ದಿನೇಶ ಎಂಬಾತ ಟೆಂಪೋ ಚಲಾಯಿಸಿಕೊಂಡು ಬೀಡಿನಗುಡ್ಡೆಯಿಂದ ಡಯಾನ ಕಡೆ ತೆರಳುತ್ತಿದ್ದಾಗ ಅಲ್ಲಿನ ಸರ್ಕಲ್ ಬಳಿ ಬೈಕ್ ಚಾಲಕನಿಗೆ ಢಿಕ್ಕಿ ಹೊಡೆಯುವಂತೆ ವಾಹನ ಚಲಾಯಿಸಿದ್ದ. ಸ್ವಲ್ಪದರಲ್ಲೇ ಬೈಕ್ ಚಾಲಕ ಪಾರಾಗಿದ್ದ. ಇದನ್ನು ಪ್ರಶ್ನಿಸಿದ ಬೈಕ್ ಚಾಲಕನಿಗೆ ದಿನೇಶ ಗದರಿಸಿದ್ದ. ಬೈಕ್ ಸವಾರ ಕೋಪಗೊಂಡು ದಿನೇಶನಿಗೆ ಕೆನ್ನೆಗೆ ಬಾರಿಸಿದ್ದ. ಕಪಾಲ ಮೋಕ್ಷದಿಂದ ಕ್ರುದ್ಧನಾದ ದಿನೇಶ ತನ್ನ ಟೆಂಪೋ ಚಲಾಯಿಸಿ ಅದೇ ಬೈಕ್ ಮೇಲೆ ಹತ್ತಿಸಿ ಜಖಂ ಮಾಡಿದ್ದ. ಬೈಕ್ ಸವಾರ ಮತ್ತು ಹಿಂಬದಿ ಸವಾರ ಆ ವೇಳೆಗೆ ಬೈಕ್ ಬಿಟ್ಟು ಹಾರಿ ಪ್ರಾಣ ಉಳಿಸಿದ್ದರು.
ಅಷ್ಟಕ್ಕೆ ತನ್ನ ರಾದ್ಧಾಂತ ನಿಲ್ಲಿಸದ ಚಾಲಕ ದಿನೇಶ ತನ್ನ ಟೆಂಪೋವನ್ನು ಒಮ್ಮಿಂದೊಮ್ಮೆಲೆ ಹಿಂದಕ್ಕೆ ಚಲಾಯಿಸಿ ಹಿಂದಿನಿಂದ ಬರುತ್ತಿದ್ದ ಇನ್ನೊಂದು ಬೈಕ್ ಅನ್ನು ಕೂಡ ಅಡಿಗೆ ಹಾಕಿ ಜಖಂಗೊಳಿಸಿದ್ದಾನೆ. ಆ ವೇಳೆ ಅಲ್ಲೇ ಇದ್ದ ಮಹಿಳೆ ಹಾಗು ಕೆಲವು ಪಾದಚಾರಿಗಳು ಪಕ್ಕಕ್ಕೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಉಡುಪಿ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಟೆಂಪೋ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL












































