ಮೈಸೂರು: ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಗೆ ದಿನ ಹತ್ತಿರ ಬರುತ್ತಲೇ ಎಲ್ಲೆಡೆ ಅರುಣ್ ಯೋಗಿರಾಜ್ ಹೆಸರು ಕೇಳಿ ಬರುತ್ತಿದೆ. ಕಾರಣ, ಅಯೋಧ್ಯೆಯ ರಾಮಲಲ್ಲನ ಮೂರ್ತಿ ರಚನೆಯಲ್ಲಿ ನಿರತರಾದವರಲ್ಲಿ ಮೈಸೂರಿನ ಅರುಣ್ ಕೂಡಾ ಒಬ್ಬರು. ಇದೇ ಅರುಣ್ ಯೋಗಿರಾಜ್ ಕೆತ್ತಿರುವ 30 ಅಡಿ ಎತ್ತರದ ಹನುಮಂತನ ಮೂರ್ತಿಯೊಂದು ಅವರ ಕಲಾ ನೈಪುಣ್ಯತೆಗೆ ಸಾಕ್ಷಿ ಹೇಳುವಂತಿದೆ.

ಅರುಣ್ ಯೋಗಿರಾಜ್ ಅವರು ಎರಡು ವರ್ಷಗಳ ಹಿಂದೆ ಮೈಸೂರಿನ ಕೆ.ಆರ್. ನಗರ ತಾಲೂಕಿನ ಚುಂಚನಕಟ್ಟೆಯಲ್ಲಿ ಈ ಏಕಶಿಲಾ ಮೂರ್ತಿಯನ್ನು ಕೆತ್ತಲಾಗಿದೆ. ಇತಿಹಾಸ ಪ್ರಸಿದ್ಧ ಯಾತ್ರಾ ಸ್ಥಳ ಮತ್ತು ಪ್ರವಾಸಿ ತಾಣವಾಗಿರುವಂತಹ ಚುಂಚನಕಟ್ಟೆಯಲ್ಲಿ ಶ್ರೀ ರಾಮನಾಥ ದೇವಾಲಯವಿದ್ದು, ಅದರ ಮುಂದೆಯೇ ಆಂಜನೇಯನ ಈ 30 ಅಡಿ ಎತ್ತರದ ಈ ಮೂರ್ತಿಯನ್ನ ಕಾಣಬಹುದಾಗಿದೆ. ಕೃಷ್ಣ ಶಿಲೆಯಿಂದ ರಚಿಸಿರುವ ಈ ಮೂರ್ತಿಯು ಸುಮಾರು 70 ಟನ್ ತೂಕವನ್ನ ಹೊಂದಿದ್ದು, ಇದರ ಪ್ರತಿಷ್ಠಾಪನೆಯ ಪೀಠ 5 ಅಡಿ ಎತ್ತರವಿದೆ. ಹೊಯ್ಸಳ ಶೈಲಿಯಲ್ಲಿ ಕೆತ್ತನೆ ಮಾಡಲಾಗಿರುವ ಈ ವಿಗ್ರಹಗೆ ನೈಜ ಸ್ವರೂಪದ ಸ್ಪರ್ಶ ನೀಡಲಾಗಿದೆ. ಆಂಜನೇಯನನ್ನೇ ಹೋಲುವ ಮೈಕಟ್ಟು, ಹೊಯ್ಸಳ ಶೈಲಿಯ ಚಿನ್ನಾಭರಣ ಹಾಗೂ ಎದೆಯ ಮಧ್ಯಭಾಗದಲ್ಲಿರುವ ಶ್ರೀ ರಾಮನ ಪದಕ ಅಲಂಕಾರದಲ್ಲಿ ಕೆತ್ತಲಾಗಿದೆ.












































