
ಬೆಂಗಳೂರು: ಇಂದು (ಸೋಮವಾರ) ಮಧ್ಯಾಹ್ನ ಬೆಂಗಳೂರಿನ ಮಾಗಡಿ ರಸ್ತೆಯ ಗೋಪಾಲಪುರದಲ್ಲಿನ ಆಹಾರ ತಯಾರಿಕಾ ಘಟಕವೊಂದರಲ್ಲಿ ಜರಗಿದ ಬಾಯ್ಲರ್ ಸ್ಫೋಟದಿಂದಾಗಿ ಇಬ್ಬರು ಕಾರ್ಮಿಕರು ಸಜೀವ ದಹನಗೊಂಡಿದ್ದು ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಾಗಡಿ ರಸ್ತೆಯಲ್ಲಿರುವ ಎಂಎಂ ಫುಡ್ ಫ್ಯಾಕ್ಟರಿಯಲ್ಲಿ ಮಧ್ಯಾಹ್ನ 1:45ರ ಸುಮಾರಿಗೆ ಅವಘಡ ಸಂಭವಿಸಿದೆ. ಮೃತರನ್ನು ಬಿಹಾರ ಮೂಲದ ಸೌರಭ್ ಹಾಗು ಮನೀಶ್ ಎಂದು ಗುರುತಿಸಲಾಗಿದೆ. ಮನೀಶ್, ಶಾಂತಿ ಸೇರಿ ನಾಲ್ವರು ಗಾಯಗೊಂಡಿದ್ದು ಗಾಯಾಳುಗಳನ್ನು ವಿಕ್ಟೊರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವೀಯಾಗಿದೆ.
ಬಾಯ್ಲರ್ ಅತಿಯಾಗಿ ಬಿಸಿಯಾಗಿದ್ದರಿಂದ ಸ್ಪೋಟಗೊಂಡಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ್ ತಿಳಿಸಿದ್ದಾರೆ. ಗೋಪಾಲಪುರ ವಸತಿ ಪ್ರದೇಶವಾಗಿದ್ದು ಇಲ್ಲಿ ಕಾರ್ಖಾನೆ ಸ್ಥಾಪಿಸಲು ಪರವಾನಿಗೆ ಪಡೆದಿದ್ದಾರೆಯೇ ಎಂದು ತನಿಖೆ ನಡೆಸಲಾಗುವುದು ಎಂದು ಸಂಜೀವ್ ಪಾಟೀಲ್ ಹೇಳಿದರು.