Karnataka

ಮುಂದುವರೆದ ಕುಟುಂಬ ರಾಜಕಾರಣ: ಹಾಸನ ವಿಧಾನಪರಿಷತ್ ಸ್ಥಾನಕ್ಕೆ ಭವಾನಿ ರೇವಣ್ಣ ಸ್ಪರ್ಧೆ

ಹಾಸನ: ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಹಾಸನದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಭವಾನಿ ರೇವಣ್ಣ ಅವರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ದೇವೇಗೌಡರ ಕುಟುಂಬದ ಮತ್ತೊಬ್ಬ ಸದಸ್ಯರು ರಾಜ್ಯ ರಾಜಕಾರಣಕ್ಕೆ ಪ್ರವೇಶಿಸಲು ವೇದಿಕೆ ಸಜ್ಜಾಗಿದೆ.

ಭವಾನಿ ರೇವಣ್ಣ ಹಾಗು ಸೂರಜ್ ರೇವಣ್ಣ ಟಿಕೆಟ್ ಆಕಾಂಕ್ಷಿಗಳಾಗಿದ್ದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಭವಾನಿ ರೇವಣ್ಣ ಅವರನ್ನು ಅಂತಿಮಗೊಳಿಸುವುದು ಖಚಿತವಾಗಿದೆ. ಹಾಸನದ ಜೆಡಿಎಸ್ ಪದಾಧಿಕಾರಿಗಳು ಹಾಗು ಶಾಸಕರುಗಳು ಹೆಚ್ಚಿನವರು ಎಚ್.ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಪರ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ, ಶ್ರವಣ ಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಮತ್ತು ಬೇಲೂರು ಕ್ಷೇತ್ರದ ಶಾಸಕ ಕೆ. ಎಸ್. ಲಿಂಗೇಶ್, ಸಕಲೇಶಪುರ ಶಾಸಕ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಹೆಚ್ ಕೆ ಕುಮಾರಸ್ವಾಮಿ ಅವರುಗಳು ಭವಾನಿ ರೇವಣ್ಣ ಅವರಿಗೆ ಪಕ್ಷದ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ದೇವೇಗೌಡರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಿದರೆ ಅನಾಯಾಸವಾಗಿ ಗೆಲ್ಲಬಹುದು, ಇಲ್ಲವಾದರೆ ಮತ ವಿಭಜನೆಗೊಂಡು ಅಭ್ಯರ್ಥಿ ಗೆಲ್ಲುವುದು ಕಷ್ಟ ಎಂಬ ಅಭಿಪ್ರಾಯ ಪಕ್ಷದ ನಾಯಕರಲ್ಲಿ ಈಗಾಗಲೇ ಮೂಡಿದೆ. ಹಾಗಾಗಿ ಈ ಬಾರಿ ದೇವೇಗೌಡರ ಕುಟುಂಬದ ಮತ್ತೊಬ್ಬ ಸದಸ್ಯ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವುದು ಖಚಿತವಾದಂತಾಗಿದೆ.

Exit mobile version