
ಕೆ.ಆರ್.ಪುರ: ಬೆಂಗಳೂರಿನ ಕೆ.ಆರ್.ಪುರದಲ್ಲಿ ಕಳ್ಳರು ಬಸ್ ನಿಲ್ದಾಣವನ್ನೇ ರಾತ್ರೋರಾತ್ರಿ ಕದ್ದೊಯ್ದ ವಿಚಿತ್ರ ಘಟನೆ ನಡೆದಿದೆ. ಕೆ.ಆರ್.ಪುರ ನ ಟಿಸಿ ಪಾಳ್ಯ ಮುಖ್ಯರಸ್ತೆಯಲ್ಲಿರುವ ಆನಂದಪುರದಲ್ಲಿ ಈ ಘಟನೆ ನಡೆದಿದೆ.
ಟಿಸಿ ಪಾಳ್ಯ ಮುಖ್ಯರಸ್ತೆಯಲ್ಲಿರುವ ಆನಂದಪುರದಲ್ಲಿಸಾರ್ವಜನಿಕ ಉಪಯೋಗಕ್ಕೆ ಕಬ್ಬಿಣದ ಸಾಧನಗಳಿಂದ ನಿರ್ಮಿಸಲಾಗಿದ್ದ ಬಸ್ ನಿಲ್ದಾಣವನ್ನು ರಾತ್ರೋರಾತ್ರಿ ವೆಲ್ಡಿಂಗ್ ಕಟ್ಟರ್ ಸಾಧನ ಮೂಲಕ ತುಂಡರಿಸಿ ಹೊತ್ತೊಯ್ದಿದ್ದಾರೆ. ಅಲ್ಲೊಂದು ಬಸ್ ನಿಲ್ದಾಣವಿತ್ತು ಎಂಬ ಕುರುಹೇ ಇಲ್ಲದಂತೆ ಮಾಡಿದ್ದಾರೆ.
ಬಸ್ ನಿಲ್ದಾಣದ ಹಿಂದೆ ಒಂದು ಕಮರ್ಷಿಯಲ್ ಕಾಂಪ್ಲೆಕ್ಸ್ ಒಂದಿದ್ದು ಆ ಕಾಂಪ್ಲೆಕ್ಸ್’ಗೆ ಅಡ್ಡವಾಗುವ ಕಾರಣ ಕಾಂಪ್ಲೆಕ್ಸಿನ ಕೆಲವರು ಸೇರಿ ಈ ಕೃತ್ಯ ನಡೆಸಿದ್ದಾರೆ ಎಂದು ಸ್ಥಳೀಯರಾದ ಲಕ್ಷಣ್ ಅವರು ಆರೋಪಿಸಿದ್ದಾರೆ. ವ್ಯಾಪಾರ ಕಡಿಮೆ ಆಗಿರುವ ಕಾರಣ ಆ ಬಸ್ ಸ್ಟಾಂಡ್ ಅನ್ನು ತೆರವುಗೊಳಿಸಲು ಹಲವು ವರ್ಷಗಳಿಂದ ಕಾಯುತ್ತಿದ್ದರು ಇದೀಗ ಅವರೇ ರಾತ್ರಿ ವೆಲ್ಡಿಂಗ್ ಕಟ್ಟರ್ ಮೂಲಕ ತೆರವುಗೊಳಿಸಿದ್ದಾರೆ ಎಂದು ಲಕ್ಷಣ್ ಹೇಳಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ. ಘಟನೆ ಸಂಬಂಧ ಕಟ್ಟಡದಲ್ಲಿದ್ದ ಸಿಸಿಟಿವಿ ಡಿವಿಆರ್ ಅನ್ನು ಪೊಲೀಸರು ವಶಪಡಿಸಿ ಪರಿಶೀಲಿಸುತ್ತಿದ್ದಾರೆ.












































