
ಬೆಂಗಳೂರು: ಹಿಜಾಬ್ ವಿವಾದದ ಸಂದರ್ಭ ಕೋರ್ಟಿನ ಮಧ್ಯಂತರ ಆದೇಶಕ್ಕೂ ಮುನ್ನ ಪರೀಕ್ಷೆಗೆ ಹಾಜರಾಗದವರಿಗೆ ಹಿಜಾಬ್ ಧರಿಸದೇ ಪರೀಕ್ಷೆ ಬರೆಯಲು ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಕಾನೂನು ಮತ್ತು ಸಂಸ ದೀಯ ವ್ಯವಹಾರ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.
ಕೋರ್ಟ್ ಅಂತಿಮ ತೀರ್ಪು ಬರುವವರೆಗೂ ಹಿಜಾಬ್ ಹಾಗು ಕೇಸರಿ ಶಾಲು ಧರಿಸುವಂತಿಲ್ಲ ಎಂದು ಕೋರ್ಟ್ ನೀಡಿದ್ದ ಮಧ್ಯಂತರ ಆದೇಶದ ಬಳಿಕ ಕೂಡ ಆದೇಶ ಧಿಕ್ಕರಿಸಿ ಪರೀಕ್ಷೆ ತಪ್ಪಿಸಿಕೊಂಡವರಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಸಾಧ್ಯವಿಲ್ಲ ಎಂದು ಅವರು ಹೇಳಿದರು.
ವಿಧಾನಸಭಾ ಕಲಾಪದ ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ರಘುಪತಿ ಭಟ್, ಹಿಜಾಬ್ ವಿವಾದ ಸಂದರ್ಭ ಪರೀಕ್ಷೆ ಬರೆಯಲಾಗದವರು ಈಗ ಹಿಜಾಬ್ ತೆಗೆದು ಪರೀಕ್ಷೆ ಬರೆಯಲು ಸಿದ್ಧರಾಗಿದ್ದಾರೆ. ಅವರಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಜತೆಗೆ ನ್ಯಾಯಾಲಯದ ಅಂತಿಮ ಆದೇಶ ಬಂದ ಅನಂತರವೂ ಆದೇಶ ಧಿಕ್ಕರಿಸಿ ಗೊಂದಲ ಸೃಷ್ಟಿಸಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕು ಎಂದು ರಘುಪತಿ ಭಟ್ ಈ ಸಂದರ್ಭ ಸರಕಾರವನ್ನು ಕೇಳಿಕೊಂಡರು.