
ಬೆಂಗಳೂರು: ಕಾಂಗ್ರೆಸ್ ತೊರೆದಿರುವ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ಹಾಗು ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಎಂಬ ಟೆಂಟ್ಗೆ ಬೆಂಕಿ ಬಿದ್ದಿದೆ. ಎಲ್ಲರೂ ಈಗ ಗೇಟು ನೋಡುತ್ತಿದ್ದಾರೆ ಎಂದು ಕಾಂಗ್ರೆಸ್ ಪರಿಸ್ಥಿತಿ ಕುರಿತು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸಾಫ್ಟ್ ಕಾರ್ನರ್ನಿಂದ ಯಡಿಯೂರಪ್ಪರ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಸಿದ್ಧರಾಮಯ್ಯ ನಮ್ಮ ಮನೆಗೆ ಯಾವಾಗ ಬರುತ್ತಾರೋ ಬರಲಿ, ಬಂದು ಬಿರಿಯಾನಿ ತಿನ್ನಲಿ ಎಂದು ಇಬ್ರಾಹಿಂ ಹೇಳಿದರು. ಬಜೆಟ್ನಲ್ಲಿ ನಮ್ಮ ಸಮುದಾಯವನ್ನು ಕಡೆಗಣಿಸಿದ್ದಾರೆ. ಸಿದ್ಧರಾಮಯ್ಯರ ಬಜೆಟ್ನಲ್ಲಿ ನಮಗೇನು ಸಿಕ್ಕಿಲ್ಲ. ಆದರೆ ಬೊಮ್ಮಾಯಿ ಈಗ ಕೊಟ್ಟಿದ್ದಾರೆ. ಅವರಿಗೆ ನಿಮ್ಮ ಕೊಡುಗೆ ಏನು? ನಮ್ಮ ಬಂಡವಾಳ ಇಲ್ಲದೇ, ಬೋನಸ್ ಹೇಗೆ ನಿರೀಕ್ಷೆ ಮಾಡುವುದು? ನಾನು ಪ್ಲಾನಿಂಗ್ ಕಮಿಷನ್ನಲ್ಲಿ ಉಪಾಧ್ಯಕ್ಷ ಇದ್ದಾಗ ಕೊಟ್ಟ ವರದಿ ಇಟ್ಟಿಲ್ಲ.
ಮುಂದಿನ ಚುನಾವಣೆಯಲ್ಲಿ ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಇಬ್ರಾಹಿಂ ಭವಿಷ್ಯ ನುಡಿದರು. ಕಾಂಗ್ರೆಸ್ನವರು ನಮಗೆ (ಅಲ್ಪಸಂಖ್ಯಾತರಿಗೆ) ಚೆನ್ನಾಗಿ ಮೇಕಪ್ ಮಾಡಿ, ಬಸ್ ಸ್ಟ್ಯಾಂಡ್ನಲ್ಲಿ ನಿಲ್ಲಿಸಿದ್ರು. ಹೋಗುವವರನ್ನು, ಬರುವವರನ್ನು ಕರೆಯುವ ಕೆಲಸ ಮಾಡಿದ್ರು. ಕಾಂಗ್ರೆಸ್ನಲ್ಲಿ ಇರುವುದು ಗೊಡ್ಡು ಎಮ್ಮೆಗಳು. ಯಾವ ಹಸು ಇದೆ ಓಟು ತರುವುದಕ್ಕೆ? ಕಾಂಗ್ರೆಸ್ನವರು ನನ್ನನ್ನು ತಳ್ಳಿದ್ದು ಆಯ್ತು. ಈಗ ನಾವು ಹೊರಗೆ ಹೋಗುತ್ತಿದ್ದೇವೆ. ಸಿದ್ಧರಾಮಯ್ಯರನ್ನು ನಂಬಿ ಕಾಂಗ್ರೆಸ್ಗೆ ಸೇರಿದೆ. ನನ್ನನ್ನು ನಡು ನೀರಲ್ಲಿ ಕೈ ಬಿಟ್ಟರು ಎಂದು ಇಬ್ರಾಹಿಂ ಬೇಸರ ವ್ಯಕ್ತಪಡಿಸಿದರು.