Karnataka

ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಅಹೋರಾತ್ರಿ ಧರಣಿ: ಕಲಾಪ ಮುಂದೂಡಿಕೆ

ಬೆಂಗಳೂರು: ರಾಷ್ಟ್ರಧ್ವಜ ಕುರಿತ ಹೇಳಿಕೆ ಹಿನ್ನೆಲೆ ಇಂದು ಕೂಡ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆಗೆ ಪಟ್ಟು ಹಿಡಿದ ಕಾಂಗ್ರೆಸ್ ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸಿ ಗದ್ದಲಕ್ಕೆ ಕಾರಣವಾಯಿತು. ಗದ್ದಲ ಮುಂದುವರೆದ ಕಲಾಪವನ್ನು ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ. ಈ ಮಧ್ಯೆ ಈಶ್ವರಪ್ಪ ರಾಜೀನಾಮೆ ಕೊಡಲೇ ಬೇಕು ಎಂದು ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.

ಇಂದು ಕೂಡ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಸಭಾಧ್ಯಕ್ಷರ ಮನವಿಗೆ ಕೂಡ ಕಾಂಗ್ರೆಸ್ ನಾಯಕರು ಒಪ್ಪದೇ ಸದನ ಗದ್ದಲದ ಗೂಡಾಗಿತ್ತು. ನಂತರ ಸಭಾಧ್ಯಕ್ಷರು ಮಧ್ಯಾಹ್ನದವರೆಗೂ ಕಲಾಪವನ್ನು ಮುಂದೂಡಿದರು. ಭೋಜನ ವಿರಾಮದ ಬಳಿಕ ಕಲಾಪ ಮತ್ತೆ ಸೇರಿದಾಗ ಕಾಂಗ್ರೆಸ್ ಸದಸ್ಯರು ಮತ್ತೆ ಪ್ರತಿಭಟನೆ ಮುಂದುವರೆಸಿದ್ದರಿಂದ ಸಭಾಧ್ಯಕ್ಷ ಕಾಗೇರಿ ನಾಳೆಗೆ ಕಲಾಪವನ್ನು ಮುಂದೂಡಿದರು.

ವಿಧಾನಪರಿಷತ್ ನಲ್ಲಿಯೂ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿ ಕಲಾಪಕ್ಕೆ ಅಡ್ಡಿಯನ್ನುಂಟು ಮಾಡಿದರು. ಗದ್ದಲದ ಮಧ್ಯೆ ಸಭಾಪತಿ ಬಸವರಾಜ ಹೊರಟ್ಟಿ ಪ್ರಶ್ನೋತ್ತರ ಅವಧಿ ಕೈಗೆತ್ತಿಕೊಂಡರು. ಪ್ರಶ್ನೋತ್ತರ ಅವಧಿ ಮುಗಿದ ನಂತರವೂ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಮುಂದುವರೆಸಿದ್ದರಿಂದ ಸಭಾಪತಿ ಮಧ್ಯಾಹ್ನದವರೆಗೂ ಕಲಾಪವನ್ನು ಮುಂದೂಡಿದರು. ಭೋಜನ ನಂತರವೂ ಮೇಲ್ಮನೆ ಕಲಾಪ ಗದ್ದಲ ನಿಲ್ಲದ ಕಾರಣ ವಿಧಾನಪರಿಷತ್ ಕಲಾಪವನ್ನು ನಾಳೆಗೆ ಮುಂದೂಡಿದರು.

Exit mobile version