
ಬೆಂಗಳೂರು: ಪಕ್ಷದ ಸಮಾರಂಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕ, ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾಷಣಕ್ಕೆ ಜಮೀರ್ ಅಹ್ಮದ್ ಖಾನ್ ಬೆಂಬಲಿಗರು ಅಡ್ಡಿಪಡಿಸಿದ ಘಟನೆ ನಡೆದಿದೆ. ಇದರಿಂದ ಬೇಸರಗೊಂಡ ಸಿದ್ದರಾಮಯ್ಯ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.
ಕರ್ನಾಟಕ ರಾಜ್ಯ ಕಾಂಗ್ರೆಸ್ಸಿನ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಕೆ. ಅಬ್ದುಲ್ ಜಬ್ಬಾರ್ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಜಮೀರ್ ಅವರನ್ನ ಕಡೆಗಣಿಸಲಾಗಿದೆ ಎಂದು ಧಾಂಧಲೆ ಎಬ್ಬಿಸಿದ ಜಮೀರ್ ಬೆಂಬಲಿಗರು ಜಮೀರ್ ಫೋಟೋ ಹಿಡಿದು ಸಿದ್ದರಾಮಯ್ಯ ಭಾಷಣ ಮಾಡುವಾಗ ಘೋಷಣೆ ಕೂಗುತ್ತ ಅಡ್ಡಿಪಡಿಸಿದರು. ಇದರಿಂದ ಮುಜುಗರಕ್ಕೊಳಗಾದ ಸಿದ್ದರಾಮಯ್ಯ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ವೇದಿಕೆಯಿಂದ ಕೆಳಗಿಳಿದರು.
ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ. ಶಿವಕುಮಾರ್ ಜಮೀರ್ ಬೆಂಬಲಿಗರ ವಿರುದ್ಧ ಹರಿಹಾಯ್ದರು. ಸಿದ್ದರಾಮಯ್ಯ ಅರ್ಧಕ್ಕೆ ಭಾಷಣ ನಿಲ್ಲಿಸುವಂತೆ ಮಾಡಿದವರು ಪಕ್ಷ ದ್ರೋಹಿಗಳು ಎಂದು ಹೇಳಿದ ಶಿವಕುಮಾರ್ ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡಿ ಎಂದು ಅಸಮಾಧಾನ ಹೊರಹಾಕಿದರು.