
ಬೆಂಗಳೂರು: ಸರಕಾರದ ವಿರುದ್ಧ ಸತತವಾಗಿ ಕೇಳಿ ಬರುತ್ತಿರುವ 40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಸಚಿವ ಎಂಟಿಬಿ ನಾಗರಾಜ್ ಅವರ ಇತ್ತೀಚಿಗಿನ ಹೇಳಿಕೆ ಮತ್ತಷ್ಟು ಪುಷ್ಟಿ ನೀಡಿದಂತಿದ್ದು ಪ್ರತಿಪಕ್ಷ ಕಾಂಗ್ರೆಸ್ಸಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಪೋಸ್ಟಿಂಗ್ ಪಡೆಯಲು ಅಭ್ಯರ್ಥಿಗಳು 80 ಲಕ್ಷ ಕೊಟ್ಟು ಬರುವ ಪರಿಸ್ಥಿತಿ ಬಗ್ಗೆ ಸಚಿವ ನಾಗರಾಜ್ ಅವರು ಹೇಳಿಕೊಂಡಿದ್ದರು.
ಅಮಾನತುಗೊಂಡಿದ್ದ ಕೆ.ಆರ್. ಪುರಂ ಪೊಲೀಸ್ ಠಾಣೆಯ ಇನ್ಪೆಕ್ಟರ್ ನಂದೀಶ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಎಂಟಿಬಿ ನಾಗರಾಜ್ ಅವರ ಹೇಳಿಕೆಗೆ ಸಂಬಂಧಿಸಿ ಪ್ರತಿಪಕ್ಷ ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಧಾಳಿ ನಡೆಸಿದೆ. ನಂದೀಶ್ ಅವರು ಹೃದಯಾಘಾತದಿಂದ ಗುರುವಾರ ನಿಧನರಾಗಿದ್ದರು. ನಂದೀಶ್ ಅವರ ಅಂತಿಮ ದರ್ಶನ ಪಡೆಯಲು ಬಂದಿದ್ದ ಸಚಿವ ಎಂಟಿಬಿ ನಾಗರಾಜ್ ಅವರು, ಪೋಸ್ಟಿಂಗ್ ಪಡೆಯಲು 70 ರಿಂದ 80 ಲಕ್ಷ ಕೊಟ್ಟು ಬಂದರೆ ಹೃದಯಾಘಾತವಾಗದೆ ಇನ್ನೇನಾಗುತ್ತದೆ ಎಂದು ಹೇಳಿದ್ದರು. ಇದೀಗ ಆ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ.
ಈ ಬಗ್ಗೆ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದ್ದು, ಸಚಿವ ಎಂಟಿಬಿ ನಾಗರಾಜ್ ಅವರು 40 ಪರ್ಸೆಂಟ್ ಸರ್ಕಾರದ ಭ್ರಷ್ಟಾಚಾರವನ್ನು ನೇರಾನೇರವಾಗಿ ಬಯಲಿಗಿಟ್ಟಿದ್ದಾರೆ ಎಂದು ಹೇಳಿಕೊಂಡಿದೆ. ಪೇ ಸಿಎಂ ಎಂದು ಆರೋಪಿಸಿದಾಗ ಉರಿದು ಬಿದ್ದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೋಸ್ಟಿಂಗ್ ಪಡೆಯಲು 70, 80 ಲಕ್ಷ ನೀಡಿದ್ದು ಯಾರಿಗೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಕೇಳಿಕೊಂಡಿದೆ.












































