
ಬೆಂಗಳೂರು: ನಗರ ಸಿವಿಲ್ ಕೋರ್ಟ್ ಆವರಣದಲ್ಲಿ ಗೂಂಡಾ ರೀತಿ ವರ್ತನೆ ತೋರಿ ಪೊಲೀಸರಿಗೆ ಆವಾಜ್ ಹಾಕಿದ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ವಕೀರರಿಗೆ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ವಕೀಲ ಜಗದೀಶ್ ಬಂಧಿಸಲಾಗಿದೆ. ಇಂದು ಸಂಜೆ ನ್ಯಾಯಾಧೀಶರ ಮುಂದೆ ಜಗದೀಶ್ ಅವರನ್ನು ಹಾಜರುಪಡಿಸುವ ಸಾಧ್ಯತೆ ಇದೆ.
ಶುಕ್ರವಾರ ದಿನ ಜಗದೀಶ್ ಅವರು ಕೋರ್ಟ್ ಆವರಣದಲ್ಲಿ ದುರ್ವರ್ತನೆ ತೋರಿರುವುದಾಗಿ ಆರೋಪಿಸಿ ಶನಿವಾರ ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ನೇತೃತ್ವದ ನಿಯೋಗವು ಪೊಲೀಸ್ ಕಮೀಷನರ್ ಕಮಲ್ ಪಂತ್ಗೆ ದೂರು ನೀಡಿದ್ದರು. ನ್ಯಾಯ ದೇವತೆ ಇರುವ ಜಾಗದಲ್ಲಿ ಶಾಂತಿಯಿಂದ ಕಾರ್ಯ ನಿರ್ವಹಿಸಲು ವಕೀಲರಿಗೆ ಅವಕಾಶ ಮಾಡಿಕೊಡುವಂತೆ ನಿಯೋಗ ಮನವಿ ಮಾಡಿತ್ತು.
ವಕೀಲ ಜಗದೀಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ವಕೀಲರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಸೇರಿದಂತೆ ಎಲ್ಲಾ ಘಟನೆಗಳನ್ನೂ ಬೆಂಗಳೂರು ವಕೀಲರ ಸಂಘ ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ ಕಮಿಷನರ್ ಅವರಿಗೆ ದೂರು ನೀಡುತ್ತಿರುವುದಾಗಿ ನಿಯೋಗದ ಸದಸ್ಯರು ಹೇಳಿದ್ದರು.












































