
ಬೆಂಗಳೂರು: ಸಚಿವ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ವಿಧಾನಮಂಡಲ ಅಧಿವೇಶನದ ವೇಳೆ ವಿಧಾನಸಭೆ ಕಲಾಪದಲ್ಲಿ ಕಾಂಗ್ರೆಸ್ ಶಾಸಕರು ರಾಷ್ಟ್ರ ಧ್ವಜವನ್ನು ಸದನದ ನಿಯಮಾವಳಿ ಮೀರಿ ಸದನದೊಳಗೆ ತಂದು, ಜತೆಗೆ ಪ್ರತಿಭಟನೆಗೆ ರಾಷ್ಟ್ರ ಧ್ವಜವನ್ನು ಬಳಕೆ ಮಾಡಿ ಅವಮಾನ ಮಾಡಿದ್ದಾರೆಂಬ ಆರೋಪದ ಕಾರಣ ಉಂಟಾದ ಗಲಭೆ ಹಿನ್ನೆಲೆಯಲ್ಲಿ ಸದನವನ್ನು ಸಭಾಧ್ಯಕ್ಷರು ನಾಳೆಗೆ ಮುಂದೂಡಿದ್ದಾರೆ.
ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹೇಳಿಕೆಯ ಹಿನ್ನಲೆ ಬೆಳಗಿನಿಂದಲೇ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸುತ್ತಿದ್ದ ಕಾಂಗ್ರೆಸ್ ಸದಸ್ಯರು ವಿಧಾನಮಂಡಲ ಅಧಿವೇಶನದ ಭೋಜನ ವಿರಾಮದ ನಂತರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸದನದ ಬಾವಿಗಿಳಿದು ಧರಣಿ ಮುಂದುವರೆಸಿದರು. ರಾಷ್ಟ್ರಧ್ವಜವನ್ನ ಹಿಡಿದು ಮನಬಂದಂತೆ ಹಾರಿಸಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುತ್ತಿರುವುದಕ್ಕೆ ಸಭಾಧ್ಯಕ್ಷರು ವಿರೋಧ ವ್ಯಕ್ತಪಡಿಸಿದರು.
ನಿಮ್ಮ ಪಕ್ಷಕ್ಕೆ ದೊಡ್ಡ ಇತಿಹಾಸ ಇದ್ದು, ಈ ರೀತಿ ರಾಷ್ಟ್ರ ಧ್ವಜವನ್ನ ಪ್ರತಿಭಟನೆಗೆ ಬಳಸಿಕೊಳ್ಳುವುದು ಸರಿಯಲ್ಲ, ರಾಷ್ರ್ಟಧ್ವಜವನ್ನ ಇಷ್ಟ ಬಂದಂತೆ ಆಡಿಸುವುದಕ್ಕೆ ಇದೇನು ನಿಮ್ಮ ಪಕ್ಷದ ಧ್ವಜವಾ?. ಇದು ದೇಶದ್ರೋಹದ ಚಟುವಟಿಕೆ ಎಂದು ಕಾಂಗ್ರೆಸ್ ಶಾಸಕರುಗಳ ವರ್ತನೆಗೆ ಸ್ಪೀಕರ್ ಆಕ್ರೋಶ ವ್ಯಕ್ತಪಡಿಸಿ ಸದನವನ್ನು ಮುಂದೂಡಿದರು.
ಕಾಂಗ್ರೆಸ್ ಶಾಸಕರುಗಳ ವರ್ತನೆಯಿಂದ ಅಸಮಾಧಾನಿತರಾದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ರಾಷ್ರ್ಟಧ್ವಜಕ್ಕೆ ಅದರದೇ ಆದ ಘನತೆ ಇದೇ, ಅದಕ್ಕೆ ಗೌರವ ಕೊಡುವುದನ್ನು ಕಲಿಯಿರಿ, ಕಾಂಗ್ರೆಸ್ ಸದಸ್ಯರು ರಾಷ್ರ್ಟಧ್ವಜಕ್ಕೆ ಅವಮಾನ ಮಾಡಿ ರಾಷ್ರ್ಟಧ್ವಜ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಕಿಡಿಕಾರಿದರು.












































