
ಮಂಗಳೂರು/ಬೆಂಗಳೂರು: ಮುಸ್ಲಿಂ ಮೂಲಭೂತವಾದಿ ಸಂಘಟನೆ ಸದಾ ಸಮಾಜ ವಿರೋಧಿ ದೇಶ ವಿರೋಧಿ ಕಾರ್ಯಗಳಲ್ಲಿ ಭಾಗಿಯಾಗುತ್ತಿರುವ ಪಿಎಫ್ಐಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮತ್ತು ಜಾರಿ ನಿರ್ದೇಶನಾಲಯಗಳು ಬಿಸಿ ಮುಟ್ಟಿಸಿದ್ದು ಶೋಧ ಕಾರ್ಯವನ್ನು ಮುಂದುವರಿಸಿವೆ. ರಾಜ್ಯದ ಬೆಂಗಳೂರು ಮಂಗಳೂರಿನ ಪಿಎಫ್ಐ ಕಚೇರಿ, ಮುಖಂಡರ ಮನೆ ಮೇಲೆ ಧಾಳಿ ನಡೆದಿದೆ.
ದೇಶಾದ್ಯಂತ ಇಂದು ಗುರುವಾರ ಬೆಳ್ಳಂಬೆಳಗ್ಗೆ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಎನ್ಐಎ, ಇಡಿ ದಾಳಿ ಮುಂದುವರಿಸಿದ್ದು ರಾಜ್ಯದ ಪೊಲೀಸರ ನೆರವಿನೊಂದಿಗೆ ಪಿಫ್ಐ ಸಂಘಟನೆಯ 100ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಮಂಗಳೂರಿನಲ್ಲಿ ಇಂದು ಗುರುವಾರ ಎಸ್ಡಿಪಿಐ, ಪಿಎಫ್ಐ ಕಚೇರಿಗಳಲ್ಲಿ ರಾಷ್ಟ್ರೀಯ ತನಿಖಾ ತಂಡ ಧಾಳಿ ಮಾಡಿ ಮೂವರು ಪಿಎಫ್ಐ ಮುಖಂಡರನ್ನು ಅರೆಸ್ಟ್ ಮಾಡಿದ್ದಾರೆ. ಮಂಗಳೂರಿನ ಪಿಎಫ್ಐ ಮುಖಂಡರಾದ ಅಶ್ರಫ್ ಎ.ಕೆ, ಮೊಹಿದ್ದೀನ್ ಹಳೆಯಂಗಡಿ, ನವಾಜ್ ಕಾವೂರು ಸೇರಿದಂತೆ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬೆಂಗಳೂರಿನಲ್ಲೂ 4 ಕಡೆ ಎನ್ಐಎ ದಾಳಿ ನಡೆಸಿದ್ದು ರಿಚ್ ಮಂಡ್ ಟೌನ್ ನ ಅಪಾರ್ಟ್ ಮೆಂಟ್ ವೊಂದರ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದೆ. ಉತ್ತರ ಕನ್ನಡದ ಸಿರಸಿ, ಕಲ್ಬುರ್ಗಿ ಸೇರಿದಂತೆ ಹಲವೆಡೆ ಏಕಕಾಲದಲ್ಲಿ ಧಾಳಿ ನಡೆಸಲಾಗಿದೆ.
ಇನ್ನು ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫೈ ಕಚೇರಿ ಮುಂಭಾಗ ಸಂಘಟನೆಯ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಪುಂಡಾಟಿಕೆ ನಡೆಸಿದರು. ನಂತರ ಹಲವರನ್ನು ವಶಕ್ಕೆ ಪಡೆದು ಪ್ರತಿಭಟನೆಯನ್ನು ಹತ್ತಿಕ್ಕಲಾಗಿದೆ.












































