
ಬೆಂಗಳೂರು: ಸರ್ಕಾರಿ ಜಾಗದಲ್ಲಿದ್ದ 126 ಮರಗಳನ್ನು ಅಕ್ರಮವಾಗಿ ಕಡಿದು ಅವುಗಳನ್ನು ಸಾಗಾಣಿಕೆ ಮಾಡಿರುವ ಆರೋಪ ಎದುರಿಸುತ್ತಿರುವ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ತಮ್ಮ ವಿಕ್ರಂ ಸಿಂಹ ಅವರನ್ನು ಅರಣ್ಯಾಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ವಿಕ್ರಂ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಂದಗೊಂಡನಹಳ್ಳಿಯ ಸರ್ಕಾರಿ ಜಮೀನಿನಲ್ಲಿದ್ದ ದೊಡ್ಡ ದೊಡ್ಡ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಿದ್ದರು.
ಶುಂಠಿ ಕೃಷಿಗಾಗಿ ಸ್ಥಳೀಯರೊಬ್ಬರ ಜಮೀನು ಲೀಸ್ ಗೆ ಪಡೆದು ಆ ಜಮೀನಿಗೆ ತಾಗಿಕೊಂಡಿದ್ದ ಸರಕಾರಿ ಅರಣ್ಯದಲ್ಲಿದ್ದ ಪ್ರಾಕೃತಿಕ ಸಂಪತ್ತನ್ನು ದೋಚಿದ್ದ ಘಟನೆ ಬೇಲೂರು ತಹಶೀಲ್ದಾರ್ ಮಮತಾ ಅವರಿಂದಾಗಿ ಬೆಳಕಿಗೆ ಬಂದಿತ್ತು. ಅಲ್ಲಿಯವರೆಗೆ ಅರಣ್ಯ ಇಲಾಖೆಗೆ ಈ ವಿಷಯ ತಿಳಿದಿರಲಿಲ್ಲ. ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪ ಆರೋಪದಡಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ ಮೋಹನ್ ಕುಮಾರ್ ಸೇರಿದಂತೆ ಐವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಘಟನೆ ಬೆಳಕಿಗೆ ಬಂದ ಬಳಿಕ ವಿಕ್ರಮ್ ಸಿಂಹ ಅವರು ತಲೆಮರೆಸಿಕೊಂಡಿದ್ದರು. ಆರಂಭದಲ್ಲಿ ತನಿಖಾ ಅಧಿಕಾರಿ ಮುಂದೆ ಹೇಳಿಕೆ ನೀಡಲು ಹಾಜರಾಗಿದ್ದ ವಿಕ್ರಂ ಸಿಂಹ ಹೆಚ್ಚಿನ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು. ಹಾಗಾಗಿ ಅರಣ್ಯ ಅಧಿಕಾರಿಗಳು ವಿಕ್ರಮ್ ಸಿಂಹನಿಗಾಗಿ ಹುಡುಕಾಟ ನಡೆಸುತ್ತಿದ್ದರು. ವಿಕ್ರಂ ಬೆಂಗಳೂರಿನಲ್ಲಿ ಇರುವ ಖಚಿತ ಮಾಹಿತಿ ಪಡೆದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಹಾಸನ) ಪ್ರಭುಗೌಡ ಬಿರಾದಾರ್ ಮತ್ತು ಎಸಿಪಿ (ಕ್ರೈಂ ಸೆಲ್) ಬೆಂಗಳೂರು ನೇತೃತ್ವದ ಜಂಟಿ ತಂಡ ಶನಿವಾರ ವಿಕ್ರಂ ಸಿಂಹನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಲ ಜಾರುಬಂಡೆ ಕಾವಲ್ನಲ್ಲಿರುವ ಅರಣ್ಯ ಕೇಂದ್ರದಲ್ಲಿ ವಿಚಾರಣೆ ನಡೆಸಿ ಆ ಬಳಿಕ ವಿಕ್ರಂನನ್ನು ಬಂಧಿಸಲಾಗಿದೆ.












































