
ಬೆಂಗಳೂರು: ದಸರಾ ಹಬ್ಬದ ಬಳಿಕ 1ನೇ ತರಗತಿಯಿಂದ ಶಾಲೆ ಆರಂಭಿಸಲು ಯೋಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.
ಈಗಾಗಲೇ ಶಾಲೆಗಳಲ್ಲಿ ಶಾಲಾರಂಭಕ್ಕೆ ತಯಾರಿ ಆರಂಭಿಸಲಾಗಿದ್ದು 1ನೇ ತರಗತಿಯಿಂದ 5ನೇ ತರಗತಿಯವರೆಗೆ ಆರಂಭಿಸುವ ಯೋಜನೆ ಇದೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯಕ್ಕೆ ಕಾಯುತ್ತಿದ್ದೇವೆ ಎಂದು ಸಚಿವರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಈ ಹಿಂದೆ ಸಚಿವರು ಶೇಕಡಾ 1ಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್ ಇರುವ ಜಿಲ್ಲೆಗಳಲ್ಲಿ ಓಕ್ಟೋಬರ್ 1ರಿಂದ 6ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಪೂರ್ಣ ಪ್ರಮಾಣದಲ್ಲಿ ತರಗತಿಗಳನ್ನು ಆರಂಭಿಸುವುದಾಗಿ ಘೋಷಿಸಿದ್ದರು. ವಾರದಲ್ಲಿ 5 ದಿನ ಶಾಲೆ ತೆರೆಯಲಿದ್ದು ಶನಿವಾರ ಹಾಗು ಭಾನುವಾರ ಶಾಲೆಯನ್ನು ಸ್ವಚ್ಛಗೊಳಿಸಲು ಹಾಗು ಸ್ಯಾನಿಟೈಸ್ ಮಾಡಲು ಬಳಸಲಾಗುತ್ತದೆ. ಜತೆಗೆ ಬಿಸಿಯೂಟವನ್ನೂ ಚಿಂತನೆಯಿದ್ದು ಒಕ್ಟೋಬರ್ ಒಂದರ ನಂತರ ಈ ಕುರಿತು ನಿರ್ಧರಿಸಲಾಗುತ್ತದೆ.
ಶಾಲೆ ಆರಂಭ ಕುರಿತು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರೆ, ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.