
ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಮೈಕ್ ಬಳಸುವ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ನಿಯಮಾವಳಿಗಳನ್ನು ರಾಜ್ಯ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದೆ. ಮತ್ತು ಹೊಸ ಮಾರ್ಗಸೂಚಿ ಕಟ್ಟುನಿಟ್ಟಾಗಿ ಜಾರಿಗೆ ಬರುವಂತೆ ಕ್ರಮ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಿದೆ.
ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಡಿಜಿ ಹಾಗೂ ಐಜಿಪಿ, ಹೆಚ್ಚುವರಿ ಅಡ್ವೊಕೇಟ್ ಜನರಲ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ, ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಸುದೀರ್ಘವಾಗಿ ಚರ್ಚಿಸಿದ ಬಳಿಕ ರಾಜ್ಯ ಸರ್ಕಾರದ ಮೂಖ್ಯ ಕಾರ್ಯದರ್ಶಿಗಳು ಮಾರ್ಗಸೂಚಿ ಆದೇಶ ಹೊರಡಿಸಿದ್ದಾರೆ.
ಬೆಳಗ್ಗೆ 6.00 ರಿಂದ ಬೆಳಗ್ಗೆ 10.00 ರವರೆಗೆ ಬಳಸಬಹುದು ಮತ್ತು ರಾತ್ರಿಯ ಸಮಯ ಎಂದರೆ ರಾತ್ರಿ 10.00 ರಿಂದ ಬೆಳಗ್ಗಿನ ಜಾವ 6.00 ರವರೆಗೆ ಸಾರ್ವಜನಿಕವಾಗಿ ಧ್ವನಿವರ್ಧಕ ಬಳಕೆ ಮಾಡುವಂತಿಲ್ಲ. ಉಳಿದ ಸಮಯದಲ್ಲಿ ಧ್ವನಿವರ್ಧಕ ಬಳಕೆ ಮಾಡಲು ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆದಿರಬೇಕು. ಮಾರ್ಗಸೂಚಿ ಪ್ರಕಾರ ಧ್ವನಿವರ್ಧಕಗಳು ಬಳಕೆದಾರರು 15 ದಿನಗಳೊಳಗೆ ಗೊತ್ತುಪಡಿಸಿದ ಪ್ರಾಧಿಕಾರದಿಂದ ಲಿಖಿತ ಅನುಮತಿಯನ್ನು ಪಡೆಯಬೇಕು. ಪಡೆಯದವರು ಸ್ವಯಂಪ್ರೇರಣೆಯಿಂದ ತೆಗೆದುಹಾಕಬೇಕು ಅಥವಾ ಗೊತ್ತುಪಡಿಸಿದ ಪ್ರಾಧಿಕಾರವು ತೆಗೆದುಹಾಕಲು ಕ್ರಮ ತೆಗೆದುಕೊಳ್ಳಬೇಕು.
ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಇಲ್ಲಿಯವರೆಗೆ ಮಸೀದಿಗಳ ಆಜಾನ್ ವಿರುದ್ಧ ಭಕ್ತಿಗೀತೆಗಳನ್ನು ಹಾಕಿ ಪ್ರತಿಭಟಿಸುತ್ತಿದ್ದ ಶ್ರೀ ರಾಮ ಸೇನೆ ಸೇರಿ ಹಿಂದೂ ಸಂಘಟನೆಗಳು ಸರಕಾರದ ಆದೇಶ ಪಾಲಿಸುವ ಸಲುವಾಗಿ ಪ್ರತಿಭಟನೆಯನ್ನು ನಿಲ್ಲಿಸುತ್ತಿದ್ದೇವೆ ಎಂದು ಹೇಳಿದೆ.