
ಬೆಂಗಳೂರು: ರಾಜ್ಯ ಪದವಿ ಪೂರ್ಣ ಶಿಕ್ಷಣ ಇಲಾಖೆ ನಡೆಸಿರುವ 2022ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಈ ಬಾರಿ ಶೇಕಡಾ 61.88ರಷ್ಟು ಫಲಿತಾಂಶ ಬಂದಿದೆ. ದಕ್ಷಿಣ ಕನ್ನಡ (ಮಂಗಳೂರು) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಉಡುಪಿ ದ್ವಿತೀಯ ಸ್ಥಾನಿಯಾಗಿದೆ. ಈ ಮೂಲಕ ಅವಿಭಜಿತ ದಕ ಜಿಲ್ಲೆ ತನ್ನ ಪ್ರಾಬಲ್ಯ ಮುಂದುವರೆಸಿದೆ.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿ, “ಈ ವರ್ಷ ಒಟ್ಟು 6,83,563 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅವರಲ್ಲಿ 4,22,966 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.” ಎಂದು ಹೇಳಿದರು.
ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದು ಶೇಕಡಾ 68.72ರಷ್ಟು ಬಾಲಕಿಯರು ಮತ್ತು ಶೇಕಡಾ 55.22ರಷ್ಟು ಬಾಲಕರು ತೇರ್ಗಡೆ ಹೊಂದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ದ್ವಿತೀಯ,ವಿಜಯಪುರ 3ನೇ ಸ್ಥಾನ, ಬೆಂಗಳೂರು ದಕ್ಷಿಣ ನಾಲ್ಕನೇ ಸ್ಥಾನ, ಉತ್ತರ ಕನ್ನಡ 5ನೇ ಸ್ಥಾನ ಹಾಗೂ ಚಿತ್ರದುರ್ಗ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.
ಶೇ.72.53 ವಿಜ್ಞಾನ ವಿದ್ಯಾರ್ಥಿಗಳು, ಶೇ.64.97 ವಾಣಿಜ್ಯ, ಶೇ.48.71 ಕಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಆರ್ಟ್ಸ್ (ಕಲಾ) ನಲ್ಲಿ 2,28,167 ವಿದ್ಯಾರ್ಥಿಗಳು, ವಾಣಿಜ್ಯ (ಕಾಮರ್ಸ್)ದಲ್ಲಿ 2,45,519 ವಿದ್ಯಾರ್ಥಿಗಳು ಮತ್ತು ವಿಜ್ಞಾನದಲ್ಲಿ 2,10,569 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.













































