
ಮೈಸೂರು: ಮೈಸೂರಿನ ನಂಜನಗೂಡಿನಲ್ಲಿ ಹಳೆಯದಾದ ದೇವಸ್ಥಾನವೊಂದನ್ನು ಜಿಲ್ಲಾಡಳಿತ ನೆಲಸಮಗೊಳಿಸಿದ್ದು, ಈ ಘಟನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಬಿಜೆಪಿಯನ್ನು ಟೀಕಿಸಿದ್ದಾರೆ. ಹೊಸ ನಿವೇಶನ ಮಂಜೂರು ಮಾಡಿ ಸರ್ವರನ್ನೂ ವಿಶ್ವಾಸಕ್ಕೆ ಪಡೆದು ನೂತನ ದೇವಸ್ಥಾನವನ್ನು ರಾಜ್ಯ ಸರ್ಕಾರವೇ ನಿರ್ಮಿಸಿಕೊಡಬೇಕು. ದೇವಸ್ಥಾನ ಕೆಡವಿ ಹಾಕಿದ ಘಟನೆ ಬಗ್ಗೆ ಮುಖ್ಯಮಂತ್ರಿಗಳು ನಿಷ್ಪಕ್ಷಪಾತ ತನಿಖೆ ನಡೆಸಿ ಕಾರಣಕರ್ತ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಹಿಂದೂ ಧರ್ಮದ ರಕ್ಷಣೆಯನ್ನು ಗುತ್ತಿಗೆ ಪಡೆದವರ ರೀತಿ ಮಾತನಾಡುವ ಬಿಜೆಪಿ ಪಕ್ಷಕ್ಕೆ ಇಂತಹ ದುಸ್ಸಾಹಸ ಮಾಡುವ ಮೊದಲು ಹಿಂದುತ್ವ ರಕ್ಷಣೆಯ ನೆನಪಾಗಲಿಲ್ಲವೇ ಎಂದು ರಾಜ್ಯ ಬಿಜೆಪಿಯನ್ನು ಸಿದ್ದರಾಮಯ್ಯ ಕೇಳಿದ್ದಾರೆ.
ಜಿಲ್ಲಾಡಳಿತದ ಈ ನಡೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು ಹಿಂದೂಗಳು ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ದೇಗುಲ ನೆಲಸಮದ ಬಗ್ಗೆ ಜಿಲ್ಲೆಯ ಅಧಿಕಾರಿಗಳು, ‘ನಾವು ರಾಜ್ಯಾದ್ಯಂತ ಧಾರ್ಮಿಕ ರಚನೆಗಳನ್ನು ಕೆಡವಲು ಹೊರಡಿಸಿದ ಆದೇಶವನ್ನು ಅನುಸರಿಸುತ್ತಿದ್ದೇವೆ. ನಂಜನಗೂಡಿನ ದೇಗುಲ ಭಾರತೀಯ ಪುರಾತತ್ವ ಸರ್ವೇಕ್ಷಣಾ (ಎಎಸ್ಐ) ನಕ್ಷೆಯಲ್ಲಿ ಇರಲಿಲ್ಲ ಹಾಗು ಇದು ಕೇವಲ 12 ವರ್ಷ ಹಳೆಯ ದೇಗುಲ’ ಎಂದು ಹೇಳಿದ್ದಾರೆ.
ಈ ವರ್ಷದ ಜುಲೈ ತಿಂಗಳಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು ಉಪ ಆಯುಕ್ತರಿಗೆ ಬರೆದ ಪತ್ರದಲ್ಲಿ ರಾಜ್ಯವು ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟು 6,395 ಅನಧಿಕೃತ ಧಾರ್ಮಿಕ ರಚನೆಗಳನ್ನು ಹೊಂದಿದೆ ಎಂದು ಉಲ್ಲೇಖಿಸಿದ್ದಾರೆ. ಪತ್ರದ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ 1,579 ಅನಧಿಕೃತ ಧಾರ್ಮಿಕ ರಚನೆಗಳಿದ್ದು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಉಳಿದಂತೆ ಶಿವಮೊಗ್ಗ 740, ಬೆಳಗಾವಿ 612, ಕೋಲಾರ 397, ಬಾಗಲಕೋಟೆ 352, ಧಾರವಾಡ 324, ಮೈಸೂರು 315 ಮತ್ತು ಕೊಪ್ಪಳದಲ್ಲಿ 306 ಅನಧಿಕೃತ ಧಾರ್ಮಿಕ ರಚನೆಗಳಿವೆ ಎಂದು ಪತ್ರದಲ್ಲಿ ಹೇಳಲಾಗಿದೆ.












































