
ಬೆಂಗಳೂರು/ಮಧುರೈ: ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಹಿಜಬ್ ವಿವಾದ ಕುರಿತು ತೀರ್ಪು ನೀಡಿದ್ದ ತ್ರಿ ಸದಸ್ಯ ಪೀಠದ ಮೂವರು ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದ್ದ ಇಬ್ಬರು ಮುಸ್ಲಿಂ ಸಂಘಟನೆಯ ಯುವಕರನ್ನು ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ.
ತಮಿಳುನಾಡಿನ ತಿರುನಲ್ವೇಲಿಯಿಂದ ಕೋವೈ ರಹಮತುಲ್ಲಾ ಮತ್ತು ತಂಜಾವೂರಿನ ಎಸ್ ಜಮಾಲ್ ಮೊಹಮ್ಮದ್ ಉಸ್ಮಾನಿಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದು ಉಳಿದ ಆರೋಪಿಗಳ ಬಗ್ಗೆ ಕೂಡ ದೂರುಗಳು ಬಂದಿದ್ದು ತನಿಖೆ ಸಾಗುತ್ತಿದೆ. ಬಂಧಿತ ಇಬ್ಬರೂ ಆರೋಪಿಗಳು ತಮಿಳುನಾಡು ತೌಹೀದ್ ಜಮಾತ್ ಎಂಬ ಇಸ್ಲಾಮಿಕ್ ಸಂಘಟನೆಯ ಸದಸ್ಯರಾಗಿದ್ದರು.
ತ್ರಿ ಸದಸ್ಯ ಪೀಠದ ನ್ಯಾಯಾಧೀಶರುಗಳಾದ, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಆವಸ್ಥಿ, ನ್ಯಾ.ಕೃಷ್ಣ ಎಸ್.ದೀಕ್ಷಿತ್ ಹಾಗು ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರುಗಳನ್ನು ಕೊಲೆ ಮಾಡುವ ಬಗ್ಗೆ ಪ್ರತಿಭಟನಾ ಸಭೆಯಲ್ಲಿ ಆರೋಪಿಗಳು ಉಲ್ಲೇಖಿಸಿದ್ದರು.
ಇಂದೂ ಮಕ್ಕಳ್ ಕಚ್ಚಿ ಪಕ್ಷವು ಬಹಿರಂಗಪಡಿಸಿದ ವೀಡಿಯೊದಲ್ಲಿ, ಮತಾಂಧ ಕೋವೈ ಆರ್ ರಹಮತುಲ್ಲಾ ಹಿಜಾಬ್ ಪ್ರಕರಣದ ತೀರ್ಪಿನ ಮೇಲೆ ನ್ಯಾಯಾಧೀಶರು ಕೊಲ್ಲಲ್ಪಟ್ಟರೆ, ಅವರ ಸಾವಿಗೆ ಅವರೇ ಹೊಣೆಗಾರರು ಎಂದು ಘೋಷಿಸಿದ್ದ. ತನ್ನ ಭಾಷಣದಲ್ಲಿ, ಜಾರ್ಖಂಡ್ನ ಜಿಲ್ಲಾ ನ್ಯಾಯಾಧೀಶರ ಬಗ್ಗೆ ಪ್ರಸ್ತಾಪಿಸಿದ್ದ ರಹಮತುಲ್ಲಾ ಕಳೆದ ವರ್ಷ ಜಾರ್ಖಂಡ್ ನ್ಯಾಯಾಧೀಶರು ಬೆಳಗಿನ ನಡಿಗೆಯಲ್ಲಿದ್ದಾಗ ಕೊಲ್ಲಲ್ಪಟ್ಟರು. ಹಾಗೆಯೇ ಕರ್ನಾಟಕದ ಮುಖ್ಯ ನ್ಯಾಯಮೂರ್ತಿಗಳು ಬೆಳಗಿನ ಜಾವ ಎಲ್ಲಿಗೆ ವಾಕಿಂಗ್ ಹೋಗುತ್ತಾರೆ ಎಂಬುದು ಜನರಿಗೆ ತಿಳಿದಿದೆ ಎಂದು ರಹಮತುಲ್ಲಾ ಬಹಿರಂಗವಾಗಿಯೇ ಕೊಲೆ ಬೆದರಿಕೆ ಒಡ್ಡಿದ್ದ.
ಈ ಬೆಳವಣಿಗೆ ಬಳಿಕ ಮೂವರು ನ್ಯಾಯಾಧೀಶರಿಗೆ ‘ವೈ’ ಹಂತದ ಭದ್ರತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಪ್ರಕಟಿಸಿದ್ದಾರೆ.