
ದರ್ಶನ ತೂಗುದೀಪ ಅವರ 55ನೇ ಸಿನೆಮಾ ಬಿ.ಸುರೇಶ ಹಾಗು ಶೈಲಜಾ ನಾಗ್ ನಿರ್ಮಾಣ ಸಂಸ್ಥೆಯಲ್ಲಿ ಬರಲಿದೆ ಎನ್ನುವುದು ಈಗಾಗಲೇ ನಿಗದಿಯಾಗಿದ್ದು ನಿಮಗೆ ಗೊತ್ತೇ ಇದೆ. ಇಂದು ಗೌರಿ ಗಣೇಶ ಹಬ್ಬದ ಶುಭ ಸಮಯದಲ್ಲಿ ಚಿತ್ರದ ಹೆಸರನ್ನು ರಿವೀಲ್ ಮಾಡಲಾಗಿದೆ.
ದರ್ಶನ್ 55ನೇ ಚಿತ್ರಕ್ಕೆ ‘ಕ್ರಾಂತಿ’ ಎಂದು ಹೆಸರಿಡಲಾಗಿದೆ. ದರ್ಶನ್ ಅವರ ‘ಯಜಮಾನ’ ಚಿತ್ರದ ತಂಡವೇ ಇಲ್ಲಿ ಇರಲಿದ್ದು ಆ ಚಿತ್ರ ನಿರ್ದೇಶಿಸಿದ್ದ ವಿ. ಹರಿಕೃಷ್ಣ ಅವರು ಕ್ರಾಂತಿಯನ್ನು ನಿರ್ದೇಶಿಸಲಿದ್ದಾರೆ. ಸಂಗೀತ ನಿರ್ದೇಶನದ ಜವಾಬ್ದಾರಿ ಕೂಡ ವಿ. ಹರಿಕೃಷ್ಣ ಅವರದೇ. ಮೀಡಿಯಾ ಹೌಸ್ ಬ್ಯಾನರ್’ನಲ್ಲಿ ಚಿತ್ರ ತಯಾರಾಗಲಿದೆ.
‘ಕ್ರಾಂತಿ’ ಪ್ಯಾನ್ ಇಂಡಿಯಾ ಸಿನೆಮಾ ಎನ್ನುವುದು ವಿಶೇಷ. ಈ ಚಿತ್ರ ಕನ್ನಡ, ಹಿಂದಿ, ತಮಿಳು, ಮಲಯಾಳಂ ಹಾಗು ತೆಲುಗು ಭಾಷೆಗಳಲ್ಲಿ ತಯಾರಾಗಲಿದೆ. ಇಂದು ಚಿತ್ರದ 5 ಭಾಷೆಯ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು. ಪೋಸ್ಟರ್ ನಲ್ಲಿ ದರ್ಶನ್ ಅವರ ಆಂಗ್ರಿ ಲುಕ್ ಇದ್ದು, ಟೈಟಲ್ ನ ಮೇಲೆ ಕಾರೊಂದು ರಸ್ತೆಯಲ್ಲಿ ವೇಗವಾಗಿ ಸಾಗುವ ಚಿತ್ರದ ಜತೆಗೆ ಮೇಲ್ಗಡೆ ಹೆಲಿಕಾಪ್ಟರ್’ಗಳು ಹಾರಾಡುತ್ತಿರುವ ಚಿತ್ರವಿದೆ. ಪೋಸ್ಟರ್ ನೋಡಿದರೆ ಪಕ್ಕಾ ಆಕ್ಷನ್ ಪ್ಯಾಕ್ ಸಿನೆಮಾದಂತೆ ಕಾಣುತ್ತದೆ.
ಸ್ವತಃ ನಟ ದರ್ಶನ್ ತೂಗುದೀಪ ಅವರು ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ‘ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ನಮ್ಮ ಮುಂದಿನ ಚಿತ್ರಕ್ಕೆ ‘ಕ್ರಾಂತಿ’ ಎಂಬ ಶೀರ್ಷಿಕೆ ಅಂತಿಮಗೊಳಿಸಲಾಗಿದೆ’ ಎಂದು ದರ್ಶನ್ ಬರೆದುಕೊಂಡಿದ್ದಾರೆ.