Movie

ಈ ಬಾರಿ ಬಿಗ್ ಬಾಸ್ ಗೆಲ್ಲೋದು ಈ ಕರಾವಳಿ ಕುವರ ಅಂತೇ ಹೌದಾ?

ಬೆಂಗಳೂರು : ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ಫಿನಾಲೆಗೆ ಕ್ಷಣಗಣನೆ ಆರಂಭವಾಗಿದ್ದು ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದೀಪಿಕಾ ದಾಸ್, ರೂಪೇಶ್ ರಾಜಣ್ಣ ಮತ್ತು ದಿವ್ಯಾ ಉರುಡುಗ ಮೊದಲ ಐದು ಫೈನಲಿಸ್ಟ್‌ಗಳಾಗಿದ್ದು, ಅಂತಿಮ ವಾರಕ್ಕೆ ಕಾಲಿಟ್ಟಿದ್ದಾರೆ. ಈ ಮಧ್ಯೆ ದಿವ್ಯ ಉರುಡುಗ ಅವರು ಕೊನೆ ಕ್ಷಣದಲ್ಲಿ ಎಲಿಮಿನೇಟ್ ಆಗಿರೋ ಸುದ್ದಿಯೂ ಬಂದಿದೆ.

ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ಇಂದು ಸಂಜೆ ಮತ್ತು ನಾಳೆ ನಡೆಯಲಿದೆ. ಇಂದು ಐದು ಫೈನಲಿಸ್ಟ್‌ಗಳಲ್ಲಿ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್‌ ಆಗುತ್ತಾರೆ. ಅದರಲ್ಲಿ ಒಬ್ಬರು ದಿವ್ಯ ಉರುಡುಗ ಅನ್ನೋದು ಪಕ್ಕ ಆಗಿದ್ದು ಇನ್ನೊಬ್ಬರು ಹೊರ ಹೋಗುವವರು ಯಾರು ಎಂಬ ಕುತೂಹಲ ಹಾಗೆಯೇ ಇದೆ. ಕೊನೆಗೆ ಮೂರು ಫೈನಲಿಸ್ಟ್‌ಗಳು ಮಾತ್ರ ಉಳಿದುಕೊಳ್ಳುತ್ತಾರೆ.

ಕರಾವಳಿಯ ಕುವರ ರೂಪೇಶ್ ಶೆಟ್ಟಿ ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್‌ 1 ಕಾರ್ಯಕ್ರಮದ ವಿನ್ನರ್‌ ಆಗಿದ್ದರು. ಇಲ್ಲಿಯೂ ಕೂಡ ಸದಾ ನಗು ಮೊಗದಿಂದ ಹಾಗು ಹೆಚ್ಚು ಹೆಚ್ಚು ಚಟುವಟಿಕೆಯಿಂದ ಇರುವ ರೂಪೇಶ್‌ ಶೆಟ್ಟಿ ಟಾಸ್ಕ್‌ಗಳಲ್ಲಿ ಉತ್ತಮ ಪರ್ಫಾಮೆನ್ಸ್ ನೀಡಿದ್ದಾರೆ. ಕ್ಯಾಪ್ಟನ್ ಆಗಿಯೂ ಅತ್ಯುತ್ತಮ ಎಂಬ ಗೌರವ ಪಡೆದಿದ್ದಾರೆ. “ಕಿಚ್ಚನ ಚಪ್ಪಾಳೆ” ಎಂಬ ಮಹತ್ತರ ಗೌರವವನ್ನೂ ಗಿಟ್ಟಿಸಿಕೊಂಡಿದ್ದಾರೆ. ಒಮ್ಮೆಯೂ ಕಳಪೆ ಪಡೆದು ಜೈಲಿಗೆ ಹೋಗಿಲ್ಲ. ಮನರಂಜನೆ ಕೊಡುವುದರಲ್ಲೂ ರೂಪೇಶ್ ಶೆಟ್ಟಿ ಹಿಂದೆ ಬಿದ್ದಿಲ್ಲ. ಸಾನಿಯಾ ಅಯ್ಯರ್ ಕುರಿತಾದ ಕೆಲ ಹೇಳಿಕೆಗಳು ಹಾಗು ನಡೆಗಳು ಅತಿಯಾಯಿತೇನೋ ಅನಿಸಿದ್ದು ಬಿಟ್ಟರೆ ಉಳಿದೆಲ್ಲವೂ ಪ್ಲಸ್ ಪಾಯಿಂಟ್ಸ್.

ಪ್ರತಿ ಬಾರಿ ಎಲಿಮಿನೇಷನ್ ರೌಂಡ್ ನಲ್ಲಿ ಅತಿ ಹೆಚ್ಚು ವೋಟ್‌ ಪಡೆದ ಕಾರಣ ಮೊದಲಿಗೆ ಸೇವ್ ಆಗುತ್ತಿದ್ದಿದ್ದು ಕೂಡ ರೂಪೇಶ್ ಶೆಟ್ಟಿ. ಅಲ್ಲಿಯೇ ರೂಪೇಶ್ ಅವರಿಗೆ ಹರಿದು ಬರುತ್ತಿರುವ ವೋಟ್ ಗಳ ಮಹಾಸಾಗರದ ಬಗ್ಗೆ ಜನರಿಗೆ ತಿಳಿದುಬಿಟ್ಟಿತ್ತು. ಇದೀಗ ಅವರ ಆತ್ಮೀಯ ಆರ್ಯವರ್ಧನ್ ಹೊರ ಹೋಗಿದ್ದು ಆರ್ಯವರ್ಧನ್ ಅವರ ಅಭಿಮಾನಿಗಳು ಕೂಡ ರೂಪೇಶ್ ಪರ ವೋಟ್ ಮಾಡಿರೋ ಸಾಧ್ಯತೆ ಹೆಚ್ಚು. ಹಾಗಾಗಿ ಈ ಬಾರಿ ರೂಪೇಶ್ ಶೆಟ್ಟಿ ಬಿಗ್‌ಬಾಸ್‌ ಗೆಲ್ಲುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version