ಮುಂಬಯಿ: ಕೇಂದ್ರ ಸಚಿವ ನಾರಾಯಣ ರಾಣೆಯವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿರುವುದು ಸಾಂವಿಧಾನಿಕ ಮೌಲ್ಯಗಳ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಆಕ್ರೋಶ ಹೊರಹಾಕಿದ್ದಾರೆ.

ಬಿಜೆಪಿ ಈ ಕ್ರಮಗಳಿಂದ ದೃತಿಗೆಡುವುದಿಲ್ಲ ಎಂದಿರುವ ನಡ್ಡಾ, ಜನ ಆಶೀರ್ವಾದ ಯಾತ್ರೆಯಲ್ಲಿ ಬಿಜೆಪಿಗೆ ಲಭಿಸುತ್ತಿರುವ ಉತ್ತಮ ಜನಸ್ಪಂದನೆ ವಿಪಕ್ಷಗಳಿಗೆ ಸಹಿಸಲಾಗುತ್ತಿಲ್ಲ. ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟು ಹೋರಾಡುತ್ತೇವೆ. ಯಾತ್ರೆ ದೇಶಾದ್ಯಂತ ಮುಂದುವರೆಯಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ದೇಶಕ್ಕೆ ಸ್ವಾತಂತ್ರ ದೊರಕಿದ ವರ್ಷ ತಿಳಿಯದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೆನ್ನೆಗೆ ಬಾರಿಸುತ್ತಿದ್ದೆ ಎಂದು ನಾರಾಯಣ ರಾಣೆ ಹೇಳಿಕೆ ಕೊಟ್ಟಿದ್ದರು. ಸ್ವಾತಂತ್ರ ದಿನಾಚರಣೆ ಸಂದರ್ಭ ಭಾಷಣದ ವೇಳೆ ಮಹಾರಾಷ್ಟ್ರ ಮುಖ್ಯಮಂತ್ರಿ ಠಾಕ್ರೆ ಸ್ವಾತಂತ್ರ ದೊರಕಿದ ವರ್ಷದ ಬಗ್ಗೆ ಪಕ್ಕದವರಿಂದ ಕೇಳಿ ಅನಂತರ ಹೇಳಿದ್ದರು. ನಾನು ಅಲ್ಲಿ ಇದ್ದಿದ್ದರೆ ಕೆನ್ನೆಗೆ ಬಾರಿಸುತ್ತಿದ್ದೆ ಎಂದಿದ್ದ ಕೇಂದ್ರ ಸಚಿವ ರಾಣೆ ಅವರ ಮೇಲೆ ಎಫ್ಐಆರ್ ದಾಖಲಿಸಿ ಬಂಧಿಸಲಾಗಿದೆ.