
ಗುವಾಹಟಿ: ಅಸ್ಸಾಮಿನ ಬಟಾದ್ರವಾದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದಲ್ಲಿ ಪೊಲೀಸ್ ಠಾಣೆಯನ್ನು ಸುಟ್ಟುಹಾಕಿದ ಕಾರ್ಯವನ್ನು ಉಗ್ರ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಆಯೋಜಿಸಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಆರೋಪಿಸಿದ್ದಾರೆ. ಅಸ್ಸಾಂನಲ್ಲಿ ಕೋಮುಗಲಭೆಯಲ್ಲಿ ಪಿಎಫ್ಐ ಕೈವಾಡವಿದೆ ಎಂದು ಆರೋಪಿಸಿದ ಮುಖ್ಯಮಂತ್ರಿ ಶರ್ಮಾ ಪಿಎಫ್ಐ ಹಾಗು ಅದರ ವಿದ್ಯಾರ್ಥಿ ವಿಭಾಗವಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸೇರಿ ಸಂಘಟನೆಯನ್ನು ನಿಷೇಧಿಸುವಂತೆ ಕರೆ ನೀಡಿದರು.
“ನಾವು ಯಾವಾಗಲೂ ಕೋಮುಗಲಭೆಯಲ್ಲಿ ಪಿಎಫ್ಐನ ಕೈವಾಡವನ್ನು ನೋಡುತ್ತೇವೆ. ಇತ್ತೀಚಿನ ಬಟಾದ್ರವ ಘಟನೆಯಲ್ಲೂ ನಾವು ಪಿಎಫ್ಐನ ಒಳಗೊಳ್ಳುವಿಕೆಯ ಸಾಕ್ಷ್ಯಗಳನ್ನು ಕಂಡುಕೊಂಡಿದ್ದೇವೆ. ಹಾಗಾಗಿ ಅಸ್ಸಾಂ ಸರ್ಕಾರವು ಪಿಎಫ್ಐ ಮತ್ತು ಸಿಎಫ್ಐ ಅನ್ನು ನಿಷೇಧಿಸಬೇಕು ಎಂದು ಅಭಿಪ್ರಾಯಪಟ್ಟಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಮನವಿ ಮಾಡಲಾಗುವುದು’’ ಎಂದು ಶರ್ಮ ಹೇಳಿದರು.
“ಪಾಪ್ಯೂಲರ್ ಫ್ರಾಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸುವಂತೆ ನಾನು ಕೇಂದ್ರ ಗೃಹ ಸಚಿವ ಅವರನ್ನು ಕೇಳಿದ್ದೇನೆ. ಆದಾಗ್ಯೂ, ಸಂಘಟನೆಯನ್ನು ನಿಷೇಧಿಸಲು ಹಲವಾರು ಕಾನೂನು ಕ್ರಮಗಳ ಅಗತ್ಯವಿದೆ. ಕೇಂದ್ರವು ಈ ವಿನಂತಿಯನ್ನು ಸೂಕ್ತವಾಗಿ ಪರಿಗಣಿಸುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದರು.












































