National

ದಾವೂದ್ ಇಬ್ರಾಹಿಂನ ಅಕ್ರಮ ಹಣ ವರ್ಗಾವಣೆ: 8 ದಿನ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಇಡಿ ವಶಕ್ಕೆ

ಮುಂಬೈ: ಭೂಗತ ಜಗತ್ತಿನ ಚಟುವಟಿಕೆಗಳಿಗೆ ಸಂಬಂಧಿಸಿದ ಅಕ್ರಮ ಹಣದ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಮೈತ್ರಿ ಸರಕಾರದ ಸಚಿವ ನವಾಬ್ ಮಲಿಕ್ ರನ್ನು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದೆ. ಮಲಿಕ್ ಅವರನ್ನು ನ್ಯಾಯಾಲಯವು ಮಾರ್ಚ್ 3ರವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದೆ.

ಇಡಿ ತಂಡವು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿದೆ. 1993 ರ ಮುಂಬೈ ಧಾಳಿ ರೂವಾರಿ ದಾವೂದ್ ಇಬ್ರಾಹಿಂ ಅವನ ಸಹೋದರಿ ದಿವಂಗತ ಹಸೀನಾ ಪಾರ್ಕರ್, ಸಹೋದರ ಇಕ್ಬಾಲ್ ಕಸ್ಕರ್ ಮತ್ತು ಸಹಚರ ಛೋಟಾ ಶಕೀಲ್ ನ ಸೋದರ ಮಾವ ಸಲೀಂ ಖುರೇಷಿಗೆ ಸೇರಿದ ಮನೆ ಸೇರಿ 10 ಸ್ಥಳಗಳಲ್ಲಿ ಶೋಧ ನಡೆಸಿದೆ. ಜೈಲಿನಲ್ಲಿದ್ದ ದಾವೂದ್ ಇಬ್ರಾಹಿಂ ಸಹೋದರ ಕಸ್ಕರ್’ನನ್ನು ಕಳೆದ ವಾರ ಬಂಧಿಸಲಾಗಿತ್ತು.

ಜಾರಿ ನಿರ್ದೇಶನಾಲಯವು ಮಹಾರಾಷ್ಟ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮತ್ತು ಎನ್‌ಸಿಪಿ ಮುಖ್ಯ ವಕ್ತಾರರೂ ಆಗಿರುವ ನವಾಬ್ ಮಲಿಕ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಸತತ 6 ಗಂಟೆಗಳ ಕಾಲ ವಿಚಾರಣೆ ನಡೆಸಿ ಹೆಚ್ಚಿನ ವಿಚಾರಣೆಗಾಗಿ ಬಂಧಿಸಲಾಯಿತು. ನಂತರ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿತು.

ಭೂಗತ ಜಗತ್ತಿನ ಚಟುವಟಿಕೆ, ಅಕ್ರಮ ಆಸ್ತಿ, ಹವಾಲಾ ವ್ಯವಹಾರಗಳಿಗೆ ಸಂಬಂಧಿಸಿ ಇದೇ ಫೆಬ್ರವರಿ ತಿಂಗಳ 15 ರಂದು ನವಾಬ್ ಮಲಿಕ್ ವಿರುದ್ಧ ಜಾರಿ ನಿರ್ದೇಶನಾಲಯ ಮುಂಬೈನಲ್ಲಿ ಹೊಸ ಪ್ರಕರಣ ದಾಖಲಿಸಿತ್ತು.

Exit mobile version