
ನವದೆಹಲಿ: ಭಾರತದಿಂದ ಪರಾರಿಯಾದ ಇಸ್ಲಾಮಿಕ್ ಮತೀಯ ಬೋಧಕ ಝಾಕಿರ್ ನಾಯಕ್ ನನ್ನು ಕತಾರ್ನಲ್ಲಿ 2022ರ ಫಿಫಾ ವಿಶ್ವಕಪ್ನ ಭಾಗವಾಗಲು ಆಹ್ವಾನಿಸಲಾಗಿದೆ. ವರದಿಗಳ ಪ್ರಕಾರ, ಅಕ್ರಮ ಹಣ ವರ್ಗಾವಣೆ ಮತ್ತು ದ್ವೇಷ ಭಾಷಣದ ಆರೋಪದ ಮೇಲೆ ಭಾರತಕ್ಕೆ ಬೇಕಾಗಿರುವ ಭಾರತೀಯ ಈ ಮತಾಂಧ ಭಾಷಣಕಾರ ಪಂದ್ಯಾವಳಿಯ ಉದ್ದಕ್ಕೂ ಧಾರ್ಮಿಕ ಉಪನ್ಯಾಸಗಳನ್ನು ನೀಡಲಿದ್ದಾನೆ. ಕತಾರಿನ ಈ ನಿರ್ಧಾರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಯಾರು ಈ ಝಾಕಿರ್ ನಾಯ್ಕ್?:
ಝಾಕಿರ್ ನಾಯ್ಕ್ ಒಬ್ಬ ಭಾರತೀಯ ದೂರದರ್ಶನಕಾರ ಮತ್ತು ವಾಗ್ಮಿ. ಈತ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಮತ್ತು ಪೀಸ್ ಟಿವಿ ನೆಟ್ವರ್ಕ್ ಅನ್ನು ಸ್ಥಾಪಿಸಿದ್ದಾನೆ. ಪೀಸ್ ಟಿವಿ ಮೂಲಕ ಮತೀಯ ದ್ವೇಷ ಹರಡುವಂತಹ ಹಾಗು ಭಯೋತ್ಪಾದನೆಯನ್ನು ಪೋಷಿಸುವಂತಹ ಭಾಷಣಗಳನ್ನು ಮಾಡುತ್ತಿರುತ್ತಾನೆ. ಈ ವಿವಾದಾತ್ಮಕ ಇಸ್ಲಾಮಿಕ್ ಬೋಧಕನನ್ನು 2016 ರಿಂದ ಭಾರತೀಯ ಅಧಿಕಾರಿಗಳು ಮನಿ ಲಾಂಡರಿಂಗ್ ಮತ್ತು ದ್ವೇಷದ ಭಾಷಣಗಳ ಕಾರಣಕ್ಕೆ ಬಂಧಿಸಲು ಕಾಯುತ್ತಿದ್ದಾರೆ. ಈತ 2016 ರ ಢಾಕಾ ಬಾಂಬ್ ಸ್ಫೋಟದ ಬಳಿಕ ಭಾರತದಿಂದ ಪಲಾಯನ ಮಾಡಿದ್ದ ಹಾಗು ಪ್ರಸ್ತುತ ಮಲೇಷ್ಯಾದಲ್ಲಿ ವಾಸಿಸುತ್ತಿದ್ದಾನೆ.
2016 ರ ಬಾಂಗ್ಲಾ ದೇಶದ ಢಾಕಾ ದಾಳಿಯಲ್ಲಿ 17 ವಿದೇಶಿಯರು ಸೇರಿದಂತೆ 20 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಮೂರು ವರ್ಷಗಳ ನಂತರ 2019 ರಲ್ಲಿ, ಶ್ರೀಲಂಕಾದಲ್ಲಿ ಈಸ್ಟರ್ ಬಾಂಬ್ ಸ್ಫೋಟದಲ್ಲಿ 45 ಮಕ್ಕಳು ಮತ್ತು 40 ವಿದೇಶಿ ಪ್ರಜೆಗಳು ಸೇರಿದಂತೆ 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಎರಡೂ ಸಂದರ್ಭಗಳಲ್ಲಿ, ದಾಳಿಯ ಹೊಣೆಗಾರಿಕೆಯನ್ನು ವಹಿಸಿಕೊಂಡ ಭಯೋತ್ಪಾದಕ ಗುಂಪುಗಳು ಮತ್ತು ವ್ಯಕ್ತಿಗಳು ಝಾಕಿರ್ ನಾಯ್ಕ್’ನನ್ನು ತಮಗೆ ಸ್ಫೂರ್ತಿ ಎಂದು ಉಲ್ಲೇಖಿಸಿದ್ದರು.












































