
ಬೆಂಗಳೂರು: ಹಿಟ್ ಅಂಡ್ ರನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಉದ್ದೇಶಿತಕಾಯ್ದೆಯ ಲ್ಲಿರುವ ಕೆಲವು ಲೋಪ ದೋಷಗಳನ್ನು ನಿವಾರಣೆ ಮಾಡುವಂತೆ ಒತ್ತಾಯಿಸಿ ಜನವರಿ 17 ರಿಂದ ಮತ್ತೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಲಾರಿ ಮಾಲೀಕರು ನಿರ್ಧರಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ವಿವರ ನೀಡಿದ ಫೆಡರೇಷನ್ ಆಫ್ ಲಾರಿ ಓನರ್ಸ್ ಅಸೋಸಿಯೇಷನ್ನ ಅಧ್ಯಕ್ಷ ಸಿ.ನವೀನ್ ರೆಡ್ಡಿ, ಜನವರಿ 17 ರಿಂದ ಮತ್ತೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತೇವೆ. ಅಸೋಸಿಯೇಷನ್ನ ಸದಸ್ಯರು ಸಭೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು.
ಹೊಸ ಕಾಯ್ದೆಯಂತೆ ಹೊರ ರಾಜ್ಯಗಳಲ್ಲಿ ಅಪಘಾತ ಸಂಭವಸಿದಾಗ ಚಾಲಕರ ಡ್ರೈವಿಂಗ್ ಲೈಸೆನ್ಸ್ ಅನ್ನು ವಶಪಡಿಸಿಕೊಳ್ಳಲಾಗುತ್ತದೆ. ಪ್ರಕರಣ ಸಂಬಂಧಿಸಿದಂತೆ ಜಾಮೀನು ನೀಡಲು ಅಲ್ಲಿನ ಸ್ಥಳೀಯರ ಭದ್ರತೆ ಕೇಳಲಾಗುತ್ತದೆ. ಇದರಿಂದ ಲಾರಿ ಚಾಲಕರಿಗೆ ತೊಂದರೆ ಆಗುತ್ತದೆ. ಇದು ಸರಿಯಲ್ಲ. ಹಿಟ್ ಅಂಡ್ ರನ್ ಪ್ರಕರಣ ಸಂಬಂಧಿಸಿದಂತೆ ತಪ್ಪಿತಸ್ಥ ಚಾಲಕರಿಗೆ 10 ವರ್ಷಗಳವರೆಗೆ ಜೈಲುಶಿಕ್ಷೆ ಜತೆಗೆ ದೊಡ್ಡ ಮೊತ್ತದ ದಂಡ ಹಾಕುವ ಪ್ರಸ್ತಾವನೆ ಮಾಡಿರುವುದರಿಂದ ದೇಶಾದ್ಯಂತ ಲಾರಿ, ಟ್ರಕ್ ಚಾಲಕರು ಆತಂಕಕ್ಕೆ ಒಳಗಾಗಿದ್ದಾರೆ. ಲಾರಿ ಉದ್ಯಮದ ಯಾರನ್ನೂ ಸಂಪರ್ಕಿಸದೇ ಚರ್ಚಿಸದೆ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಆಕ್ರೋಶ ವ್ಯಕ್ತಪಡಿಸಿದರು.
ಅನಿರ್ದಿಷ್ಟಾವಧಿ ಮುಷ್ಕರದಿಂದ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುವ ಆತಂಕ ಎದುರಾಗಿದೆ. ಮುಷ್ಕರ ಹೆಚ್ಚು ದಿನ ಮುಂದುವರೆದಷ್ಟು ಬೆಲೆ ಏರಿಕೆ ಆತಂಕ ಹೆಚ್ಚು.