
ನವದೆಹಲಿ: ಭಾರತದ ಪಂಜಾಬ್ ಮತ್ತು ಅದರ ಸುತ್ತಮುತ್ತಲಿನ ರಾಜ್ಯಗಳಲ್ಲಿ ರೈಲ್ವೆ ಹಳಿಗಳನ್ನು ಗುರಿಯಾಗಿಸಲು ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ದೊಡ್ಡ ಸಂಚು ರೂಪಿಸಿದೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆಯನ್ನು ನೀಡಿವೆ.
ಐಎಸ್ಐ ಪಾಯೋಜಿತ ಭಯೋತ್ಪಾದಕರು ಪಂಜಾಬ್ ಮತ್ತು ಪಕ್ಕದ ರಾಜ್ಯಗಳಲ್ಲಿ ರೈಲ್ವೆ ಹಳಿಗಳನ್ನು ಸ್ಫೋಟಿಸಲು ಯೋಜಿಸಿದ್ದಾರೆ ಎಂದು ಎಚ್ಚರಿಕೆ ನೀಡಿದೆ. ಸರಕು ಸಾಗಣೆ ರೈಲುಗಳನ್ನು ಗುರಿಯಾಗಿಸಿ ರೈಲು ಹಳಿಗಳನ್ನು ಸ್ಫೋಟಿಸುವ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಭಾರತದ ಗುಪ್ತಚರ ಸಂಸ್ಥೆಗಳು ತಿಳಿಸಿವೆ.
ರೈಲ್ವೆ ಹಳಿಗಳನ್ನು ಗುರಿಯಾಗಿಸಲು ಐಎಸ್ಐ ಭಾರತದಲ್ಲಿನ ತನ್ನ ಕಾರ್ಯಕರ್ತರಿಗೆ ದೊಡ್ಡ ಪ್ರಮಾಣದಲ್ಲಿ ಹಣ ನೀಡುತ್ತಿದೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆಯಲ್ಲಿ ತಿಳಿಸಿವೆ. ಭಾರತದಲ್ಲಿ ಇರುವ ಪಾಕಿಸ್ತಾನದ ಸ್ಲೀಪರ್ ಸೆಲ್ಗಳಿಗೆ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಭಾರಿ ಮೊತ್ತವನ್ನು ನೀಡಲಾಗುತ್ತಿದೆ. ಈ ಫಂಡಿಂಗ್ ಭಾರತದಲ್ಲಿ ಧರ್ಮದ ಹೆಸರಲ್ಲಿ ಗಲಭೆ ಎಬ್ಬಿಸುವಲ್ಲಿಯೂ ಬಳಕೆಯಾಗುತ್ತಿದ್ದು ಎನ್.ಐ.ಎ ಈಗಾಗಲೇ ಈ ಬಗ್ಗೆ ತನಿಖೆ ನಡೆಸುತ್ತಿದೆ.












































