ಕೋಲ್ಕತ್ತಾ: ದೆಹಲಿಯಲ್ಲಿಐ.ಎನ್.ಡಿ.ಐ.ಎ ಪ್ರಮುಖ ಮಿತ್ರ ಪಕ್ಷ ಟಿಎಂಸಿಯು ಸೋಮವಾರದಂದು ಮಮತಾ ಬ್ಯಾನರ್ಜಿಯಂತಹ ಹಿರಿಯ ನಾಯಕರನ್ನು ಮೈತ್ರಿಕೂಟದ ಮುಖವಾಗಿ ಪ್ರತಿಬಿಂಬಿಸುವಂತೆ ಕಾಂಗ್ರೆಸ್ ಪಕ್ಷವನ್ನು ಆಗ್ರಹಿಸಿದೆ.

2024 ರ ಲೋಕಸಭಾ ಚುನಾವಣೆ ಬಳಿಕ ಪ್ರಧಾನಿ ಅಭ್ಯರ್ಥಿಯನ್ನು ಈಗಲೇ ನಿರ್ದರಿಸುವ ಬಗ್ಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೆಹಲಿಯಲ್ಲಿ ಸಭೆ ನಡೆಸಿದ್ದಾರೆ.
ಮೂರು ರಾಜ್ಯಗಳ ಸೋಲಿನಿಂದ ಕಾಂಗ್ರೆಸ್ ಪಾಠ ಕಲಿಯಬೇಕು. ಮನೆ ಮಾಲೀಕರ ಮನಸ್ಥಿತಿಯಿಂದ ಹೊರಬನ್ನಿ. ತನ್ನ ಮಿತ್ರರನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮೂರು ಬಾರಿ ಮುಖ್ಯಮಂತ್ರಿ, ಮೂರು ಬಾರಿ ಕೇಂದ್ರ ಸಚಿವರಾದ ಮಮತಾ ಬ್ಯಾನರ್ಜಿ ಮತ್ತು ಇತರ ಹಿರಿಯ ನಾಯಕರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕು ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಟಿಎಂಸಿ ವಕ್ತಾರ ಕುನಾಲ್ ಘೋಷ್ ಆಗ್ರಹಿಸಿದ್ದಾರೆ.
ದೇಶದ ಅತ್ಯಂತ ಹಳೆಯ ಪಕ್ಷದ ಪ್ರದರ್ಶನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಘೋಷ್, ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಪದೇ ಪದೇ ವಿಫಲವಾಗಿದೆ. ಇನ್ನೊಂದೆಡೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹಲವು ಬಾರಿ ಬಿಜೆಪಿಯನ್ನು ಸೋಲಿಸುವ ಮೂಲಕ ದಾಖಲೆ ಬರೆದಿದೆ.’ ಎಂದು ಹೇಳಿದರು.
ಟಿಎಂಸಿಯ ಟೀಕೆಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಕಾಂಗ್ರೆಸ್ ವಕ್ತಾರ ಸೌಮ್ಯಾ ಅಯಿಚ್ ರಾಯ್, ಬಿಜೆಪಿ ವಿರುದ್ಧ ಹೋರಾಡಲು ಟಿಎಂಸಿ ಯಿಂದ ಪಾಠ ಕಲಿಯುವ ಅಗತ್ಯವಿಲ್ಲ. ಕಾಂಗ್ರೆಸ್ ನಿರಂತರ ಹೋರಾಟ ನಡೆಸುತ್ತಿದೆ. ಆದರೆ ಟಿಎಂಸಿ ಹಲವು ಬಾರಿ ಬಿಜೆಪಿ ಜತೆ ರಾಜಿ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.












































