
ನವದೆಹಲಿ : ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಂಘಟನೆ ಅಧಿಕಾರವನ್ನು ವಹಿಸಿಕೊಂಡಿರುವ ವಿದ್ಯಮಾನಗಳ ಹಿನ್ನಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ, ಅಫ್ಘಾನಿಸ್ತಾನದಲ್ಲಿ ಭಾರತದ ರಾಯಭಾರಿಯಾಗಿದ್ದ ರುದ್ರೇಂದ್ರ ಟಂಡನ್ ಅವರೊಂದಿಗೆ ಸುದೀರ್ಘ ಸಭೆ ನಡೆಸಿದರು.
ವಿಶೇಷ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಹಿತ ಕೆಲ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಯಾವ ವಿಷಯದ ಬಗ್ಗೆ ಚರ್ಚಿಸಲಾಯಿತು, ಏನು ನಿರ್ಧಾರ ಕೈಗೊಳ್ಳಲಾಯಿತು ಎನ್ನುವುದರ ಬಗ್ಗೆ ತಿಳಿದು ಬಂದಿಲ್ಲ. ರಾಷ್ಟ್ರೀಯ ಭದ್ರತೆಯ ಕುರಿತಾದ ಚರ್ಚೆ ಎಡಿಎ ಕಾರಣ ಸಭೆಯ ಚರ್ಚಾ ವಿಷಯಗಳನ್ನು ಗೌಪ್ಯವಾಗಿಡಲಾಗಿದೆ.
ಅಫ್ಘಾನಿಸ್ತಾನದಲ್ಲಿನ ಅನಿಶ್ಚಿತತೆ, ರಾಜಕೀಯ ವಿಪ್ಲವ ಹಾಗು ಹದಗೆಟ್ಟ ಭದ್ರತಾ ಸ್ಥಿತಿಯ ಕಾರಣ ಭಾರತ ಇಂದು ಅಲ್ಲಿನ ತನ್ನ ರಾಯಭಾರ ಕಚೇರಿಯನ್ನು ಮುಚ್ಚಿದೆ. ಅಲ್ಲಿನ ತನ್ನ ರಾಯಭಾರಿ ಹಾಗು ಅಧಿಕಾರಿಗಳನ್ನು ಭಾರತಕ್ಕೆ ವಾಪಸು ಕರೆಸಿಕೊಂಡಿದೆ.
ಅಫ್ಘಾನ್ ವಿದ್ಯಮಾನ ಬಗ್ಗೆ ವಿಶ್ವದ ಹೆಚ್ಚಿನ ದೇಶಗಳು ತನ್ನದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಭಾರತ ಇನ್ನೂ ಕೂಡ ಅಫ್ಘಾನ್ ಬೆಳವಣಿಗೆ ಬಗ್ಗೆ ಹೇಳಿಕೆ ನೀಡಿಲ್ಲ. ಸದ್ಯಕ್ಕೆ ಭಾರತ ಕಾದು ನೋಡುವ ತಂತ್ರ ಅನುಸರಿಸಿದೆ. ಚೀನಾ ಹಾಗು ರಷ್ಯಾ ದೇಶಗಳು ತಾಲಿಬಾನ್ ಬಗ್ಗೆ ಮೃದು ಧೋರಣೆಯ ಅಥವಾ ಪರೋಕ್ಷ ಬೆಂಬಲದ ಹೇಳಿಕೆ ನೀಡಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ.