
ಇಸ್ಲಾಮಾಬಾದ್: ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಪಾಕಿಸ್ತಾನದ ಮಾಜಿ ಕ್ರಿಕೆಟರ್ ಹಿಂದೂ ಧರ್ಮೀಯನಾಗಿರುವ ಡ್ಯಾನಿಶ್ ಕನೇರಿಯಾ ಅವರು ಶಾಹಿದ್ ಅಫ್ರಿದಿ ತನ್ನನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಪದೇ ಪದೇ ಒತ್ತಾಯಿಸುತ್ತಿದ್ದ ಎಂದು ಆರೋಪಿಸಿದ್ದಾರೆ. ಅಫ್ರಿದಿ ಆರೋಪಕ್ಕೆ ಉತ್ತರವಾಗಿ ಕನೇರಿಯ ಅವರಿಂದ ಈ ಸ್ಪೋಟಕ ಹೇಳಿಕೆ ಹೊರಬಿದ್ದಿದೆ.
ಈ ಹಿಂದೆ ಶಾಹಿದ್ ಅಫ್ರಿದಿ ಕಾನೇರಿಯ ಕುರಿತು ಮಾತನಾಡುತ್ತಾ, “ಪಾಕಿಸ್ತಾನದ ಮಾಜಿ ನಾಯಕ ಲೆಗ್ ಸ್ಪಿನ್ನರ್ ನಮ್ಮ ಶತ್ರು ರಾಷ್ಟ್ರಕ್ಕೆ ಸಂದರ್ಶನ ನೀಡುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು. “ನನ್ನ ವರ್ತನೆ ಕೆಟ್ಟದಾಗಿದ್ದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಥವಾ ಅವರು ಆಡುತ್ತಿರುವ ಇಲಾಖೆಗೆ ಏಕೆ ದೂರು ನೀಡಲಿಲ್ಲ. ಅವರು ನಮ್ಮ ಶತ್ರು ದೇಶಕ್ಕೆ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಸಂದರ್ಶನಗಳನ್ನು ನೀಡುತ್ತಿದ್ದಾರೆ” ಎಂದು ಆಫ್ರಿದಿ ಹೇಳಿದ್ದರು.
ಭಾರತ ಪಾಕಿಸ್ತಾನದ ಶತ್ರು ರಾಷ್ಟ್ರವಲ್ಲ ಎಂದು ಕನೇರಿಯಾ ಹೇಳಿದ್ದು, ಬದಲಿಗೆ ‘ಧರ್ಮದ ಹೆಸರಿನಲ್ಲಿ ಜನರನ್ನು ಪ್ರಚೋದಿಸುವವರು’ ಶತ್ರುಗಳು ಎಂದು ಪರೋಕ್ಷವಾಗಿ ಶಾಹಿದ್ ಅಫ್ರಿದಿ ಹಾಗು ಇತರ ಮುಸ್ಲಿಂ ಆಟಗಾರರ ಬಗ್ಗೆ ಕುಟುಕಿದ್ದಾರೆ. “ಭಾರತ ನಮ್ಮ ಶತ್ರುವಲ್ಲ. ಧರ್ಮದ ಹೆಸರಿನಲ್ಲಿ ಜನರನ್ನು ಪ್ರಚೋದಿಸುವವರು ನಮ್ಮ ಶತ್ರುಗಳು. ನೀವು ಭಾರತವನ್ನು ನಿಮ್ಮ ಶತ್ರು ಎಂದು ಪರಿಗಣಿಸಿದರೆ, ಯಾವುದೇ ಭಾರತೀಯ ಮಾಧ್ಯಮ ಚಾನಲ್ಗಳಿಗೆ ಎಂದಿಗೂ ಹೋಗಬೇಡಿ. ಬಲವಂತದ ಮತಾಂತರದ ವಿರುದ್ಧ ನಾನು ಧ್ವನಿ ಎತ್ತಿದಾಗ, ನನ್ನ ವೃತ್ತಿಜೀವನ ನಾಶವಾಗುತ್ತದೆ ಎಂದು ನನಗೆ ಬೆದರಿಕೆ ಹಾಕಲಾಯಿತು”ಎಂದು ಪಾಕಿಸ್ತಾನ ಪರ 61 ಟೆಸ್ಟ್ ಕ್ರಿಕೆಟ್ ಪಂದ್ಯ ಆಡಿರುವ ಕನೇರಿಯ ಅವರು ಹೇಳಿದರು.