
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಮುಸ್ಲಿಂ ಭಯೋತ್ಪಾದಕರು ಹಿಂದೂ ಕಾಶ್ಮೀರಿ ಪಂಡಿತನೊಬ್ಬನನ್ನು ಆತ ಕೆಲಸ ಮಾಡುತ್ತಿದ್ದ ಸರಕಾರಿ ಕಚೇರಿಯಲ್ಲೇ ಗುಂಡಿಟ್ಟು ಕೊಂದ ಒಂದು ದಿನದ ನಂತರ, ಬುದ್ಗಾಮ್ನಲ್ಲಿ ಕಾಶ್ಮೀರಿ ಪಂಡಿತರು ಪ್ರತಿಭಟನೆ ಮೂಲಕ ತಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.
ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ತನ್ನ ಕಚೇರಿಯಲ್ಲಿ ಚಾದೂರ ತಹಸಿಲ್ ಕಚೇರಿಯ ಉದ್ಯೋಗಿ ರಾಹುಲ್ ಭಟ್ ಅವರನ್ನು ಕೊಂದ ನಂತರ ಕಣಿವೆಯ ಅಂಚಿನಲ್ಲಿರುವ ಕಾಶ್ಮೀರಿ ಪಂಡಿತ್ ಸಮುದಾಯದ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಪ್ರತಿಭಟನೆಗಳು ಭುಗಿಲೆದ್ದವು. ಪ್ರತಿಭಟನಾಕಾರರು ಹತ್ಯೆಯಲ್ಲಿ ಭಾಗಿಯಾದ ಭಯೋತ್ಪಾದಕರನ್ನು ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ.
“ಆಡಳಿತವು ನಮ್ಮಂತಹ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸಲು ಸಾಧ್ಯವಾದರೆ, ಅವರು ನಿನ್ನೆ ಭಯೋತ್ಪಾದಕನನ್ನು ಬಂಧಿಸಬಹುದಿತ್ತಲ್ಲ,” ಎಂದು ಪ್ರತಿಭಟನಾಕಾರ ಅಪರ್ಣಾ ಪಂಡಿತ್ ಪ್ರಶ್ನಿಸಿದರು.
ಏತನ್ಮಧ್ಯೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಾಧ್ಯಮದ ಜೊತೆ ಮಾತನಾಡುತ್ತಾ, “ಪ್ರತಿಭಟನಾಕಾರರನ್ನು ತಡೆಯಲು ಅಂತಿಮವಾಗಿ ಕೆಲವು ಅಶ್ರುವಾಯು ಶೆಲ್ಗಳನ್ನು ಎಸೆಯಲಾಯಿತು. ಆದರೆ, ಪ್ರತಿಭಟನಾಕಾರರು ಮತ್ತೆ ಶೇಖ್ಪೋರಾ ರಸ್ತೆಯಲ್ಲಿ ಪ್ರತಿಭಟನೆಗಾಗಿ ಪುನಃ ಸೇರಿಕೊಂಡರು ಮತ್ತು ಮುಖ್ಯ ರಸ್ತೆಯನ್ನು ತಡೆದರು” ಎಂದು ತಿಳಿಸಿದ್ದಾರೆ.
ಇದರ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರ ಆಡಳಿತ ರಾಹುಲ್ ಭಟ್ ಹತ್ಯೆಯ ತನಿಖೆಗಾಗಿ ಎಸ್ಐಟಿಯನ್ನು ರಚಿಸಿದೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಜಮ್ಮು ಕಾಶ್ಮೀರ ಆಡಳಿತವು ರಾಹುಲ್ ಭಟ್ ಅವರ ಪತ್ನಿಗೆ ಜಮ್ಮುವಿನಲ್ಲಿ ಸರ್ಕಾರಿ ಉದ್ಯೋಗ ಮತ್ತು ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಿದೆ ಎಂದು ಘೋಷಿಸಿದರು.
“ಹೇಯ ಭಯೋತ್ಪಾದನಾ ದಾಳಿಯ ಎಲ್ಲಾ ಅಂಶಗಳನ್ನು ತನಿಖೆ ಮಾಡಲು ವಿಶೇಷ ತನಿಖಾ ತಂಡವನ್ನು ರಚಿಸಲು ನಿರ್ಧರಿಸಲಾಗಿದೆ. ಸಂಬಂಧಪಟ್ಟ ಪೊಲೀಸ್ ಠಾಣೆಯ ಎಸ್ಎಚ್ಒ ಕೂಡ ಲಗತ್ತಿಸಲಾಗಿದೆ” ಎಂದು ಜೆಕೆ ಎಲ್ಜಿ ಕಚೇರಿ ಟ್ವೀಟ್ ಮಾಡಿದೆ.