
ಭೋಪಾಲ್: ಕ್ರಿಸ್ಮಸ್ ದಿನದ ಮುನ್ನಾದಿನದಂದು ಶಾಲೆಗಳಲ್ಲಿ ಹಿಂದೂ ಮಕ್ಕಳನ್ನು ಸಾಂತಾ ಕ್ಲಾಸ್ ಮಾಡಬೇಡಿ ಎಂದು ಶಾಲಾ ಮುಖ್ಯಸ್ಥರಿಗೆ ಮಧ್ಯಪ್ರದೇಶದ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಘಟಕ ಪತ್ರ ಬರೆದಿದೆ. ಇದು ಹಿಂದೂ ಸಂಸ್ಕೃತಿಯ ಮೇಲಿನ ಧಾಳಿಯಾಗಿದ್ದು ಎಲ್ಲೆಡೆ ಶಾಲೆ ನರ್ಸರಿಗಳಲ್ಲಿ ಮಕ್ಕಳಿಗೆ ಸಂತಾ ಕ್ಲಾಸ್ ವೇಷ ತೊಡಿಸುವ ಅಜೆಂಡಾ ನಡೆಯುತ್ತಿದೆ ಎಂದು ವಿಹಿಂಪ ಹೇಳಿದೆ.
ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಯಲ್ಲಿ ವಿದ್ಯಾರ್ಥಿಗಳನ್ನು ಸಾಂತಾ ಕ್ಲಾಸ್ ಮಾಡಲಾಗುತ್ತಿದೆ ಮತ್ತು ಮಕ್ಕಳಿಗೆ ಶಾಲೆಗೆ ಕ್ರಿಸ್ಮಸ್ ಟ್ರೀಗಳನ್ನು ತರುವಂತೆ ಕೇಳಿಕೊಳ್ಳಲಾಗಿದೆ ಎಂಬ ವರದಿಗಳ ನಡುವೆ ಭೋಪಾಲ್ನ ಎಲ್ಲಾ ಶಾಲಾ ಮುಖ್ಯಸ್ಥರಿಗೆ ಪತ್ರ ಬರೆಯಲಾಗಿದೆ. “ಇದು ನಮ್ಮ ಹಿಂದೂ ಸಂಸ್ಕೃತಿಯ ಮೇಲಿನ ದಾಳಿಯಾಗಿದೆ, ಇದು ಹಿಂದೂ ಮಕ್ಕಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪ್ರೇರೇಪಿಸುವ ಪಿತೂರಿಯಾಗಿದೆ” ಎಂದು ವಿಎಚ್ಪಿ ಪತ್ರದಲ್ಲಿ ಬರೆಯಲಾಗಿದೆ.
ಮಿಷನರಿಗಳಲ್ಲದ ಶಾಲೆಗಳಲ್ಲಿ ಕ್ರಿಸ್ಮಸ್ ದಿನವನ್ನು ಆಚರಿಸುವ ಬಗ್ಗೆ ವಿಎಚ್ಪಿ ಪ್ರಶ್ನಿಸಿದೆ, ಶಾಲೆಗಳು ಹಿಂದೂ ಮಕ್ಕಳನ್ನು ಸಂತಾ ಕ್ಲಾಸ್ ಮಾಡುವ ಮೂಲಕ ಕ್ರಿಶ್ಚಿಯನ್ ಧರ್ಮವನ್ನು ಪ್ರಚಾರ ಮಾಡುತ್ತಿವೆಯೇ ಎಂದು ಅದು ಪ್ರಶ್ನಿಸಿದೆ. ನಮ್ಮ ಹಿಂದೂ ಮಕ್ಕಳು ರಾಮನಾಗಬೇಕು, ಕೃಷ್ಣನಾಗಬೇಕು, ಬುದ್ಧನಾಗಬೇಕು, ಗೌತಮನಾಗಬೇಕು, ಮಹಾವೀರನಾಗಬೇಕು, ಗುರು ಗೋವಿಂದಸಿಂಗ್ ಆಗಬೇಕು, ಇವರೆಲ್ಲ ಆಗಬೇಕು, ಕ್ರಾಂತಿಕಾರರಾಗಬೇಕು, ಮಹಾಪುರುಷರಾಗಬೇಕು, ಆದರೆ ಸಂತ ಕ್ಲಾಸ್ ಆಗಬಾರದು.
ಪೋಷಕರ ಅನುಮತಿಯಿಲ್ಲದೆ ವಿದ್ಯಾರ್ಥಿಗಳನ್ನು ಸಾಂಟಾ ಕ್ಲಾಸ್ಗಳನ್ನಾಗಿ ಮಾಡಿದರೆ, ವಿಎಚ್ಪಿ ಆ ಶಾಲೆಯ ವಿರುದ್ಧ ಶಾಸನಬದ್ಧ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಕೂಡ ಎಚ್ಚರಿಕೆ ನೀಡಿದೆ.












































